ದಾಂಡೇಲಿಯ ಫೈರೋಜಾ ಅಲಿ ಅವರು ತಮ್ಮ ತಾಯಿ ರುಕ್ಸನಾ ಬೇಗಂ ಅವರ ಜೊತೆ ಮುನಿಸಿಕೊಂಡಿದ್ದಾರೆ. ಇದರೊಂದಿಗೆ `ತನ್ನ ಕಾರು ತನಗೆ ನೀಡದೇ ವಂಚಿಸಿದ್ದಾರೆ’ ಎಂದು ತಾಯಿ ರುಕ್ಸನಾ ಬೇಗಂ ಜೊತೆ ಅವರ ಗೆಳತಿಯ ಪುತ್ರ ಆಸೀಪ ಸೌದಗಾರ್ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ!
ದಾಂಡೇಲಿಯ ಗಾಂಧೀನಗರದಲ್ಲಿ ವಾಸವಾಗಿರುವ ಫೈರೋಜಾ ಅಲಿ ಅವರಿಗೆ 31 ವರ್ಷ. ಅವರು ಡಬ್ಲುಸಿಪಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಕೈ ತುಂಬ ಸಂಬಳವನ್ನು ಪಡೆಯುತ್ತಾರೆ. ಅದಾಗಿಯೂ ಏಳು ವರ್ಷ ಹಿಂದಿನ 10 ಲಕ್ಷ ರೂಪಾಯಿಯ ಆರ್ಟಿಗಾ ಕಾರಿಗಾಗಿ ಅವರು ತಾಯಿ ವಿರುದ್ಧವೇ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ರುಕ್ಸನಾ ಬೇಗಂ ಅವರ ಸ್ನೇಹಿತೆಯ ಮಗ ಆಸೀಪ ಸೌದಗಾರ್ ಹೊರದೇಶದಲ್ಲಿ ಕೆಲಸಕ್ಕಿದ್ದರು. `ತನಗೆ ಇಲ್ಲಿ ಕೆಲಸ ಮಾಡಲು ಆಗುವುದಿಲ್ಲ. ನಾನು ನಿಮ್ಮೂರಿಗೆ ಬರುವೆ. ಸಹಾಯ ಮಾಡಿ’ ಎಂದು ಆಸೀಪ ಸೌದಗಾರ್ ಅವರು ರುಕ್ಸನಾ ಬೇಗಂ ಅವರಲ್ಲಿ ಕೇಳಿಕೊಂಡಿದ್ದರು. ಆ ವೇಳೆಯಲ್ಲಿಯೇ ಫೈರೋಜಾ ಅಲಿ ಇದಕ್ಕೆ ವಿರೋಧವ್ಯಕ್ತಪಡಿಸಿದ್ದರು. `ಅಪರಿಚಿತರಿಗೆ ಸಹಾಯ ಮಾಡುವುದು ಬೇಡ’ ಎಂದು ಫೈರೋಜಾ ಅಲಿ ತಾಯಿಯ ಮನವೊಲೈಸುವ ಪ್ರಯತ್ನ ಮಾಡಿದ್ದರು.
ಅದಾಗಿಯೂ, ರುಕ್ಸನಾ ಬೇಗಂ ಅವರು ಆಸೀಪ್ ಸೌದಗಾರ್ ಅವರಿಗೆ ನೆರವು ನೀಡಲು ಮುಂದಾಗಿದ್ದರು. 2018ರಲ್ಲಿ ಆಸೀಪ್ ಸೌದಗಾರ್ ಹೊರದೇಶದಿಂದ ಆಗಮಿಸಿದ್ದರು. ಆ ವೇಳೆ ಆಸೀಪ್ ಸೌದಗಾರ್ ಅವರಿಗೆ ರುಕ್ಸನಾ ಬೇಗಂ ಅವರು ತಮ್ಮ ಮಗನ ಬಳಿಯಿದ್ದ ಕಾರನ್ನು ಕೊಟ್ಟಿದ್ದರು. `ಆ ಕಾರು ಬಾಡಿಗೆ ಹೊಡೆದು ಜೀವನ ನಡೆಸು’ ಎಂದು ಹೇಳಿದ್ದರು. ಜೊತೆಗೆ `ಪ್ರತಿ ತಿಂಗಳು 12 ಸಾವಿರ ರೂ ನಮಗೆ ಕೊಡಬೇಕು’ ಎಂದು ತಾಕೀತು ಮಾಡಿದ್ದರು. ಕಾರಿನ ದಾಖಲಾತಿಗಳನ್ನು ಸಹ ಆಸೀಪ್ ಸೌದಗಾರ್’ಗೆ ಒಪ್ಪಿಸಿದ್ದರು.
ಅದರ ಪ್ರಕಾರ, 2018ರಿಂದ ನಾಲ್ಕು ವರ್ಷದವರೆಗೂ ಪ್ರತಿ ತಿಂಗಳು 12 ಸಾವಿರ ರೂ ಹಣ ರುಕ್ಸನಾ ಬೇಗಂ ಅವರ ಖಾತೆಗೆ ಜಮಾ ಆಗುತ್ತಿತ್ತು. ಆಸೀಪ್ ಸೌದಗಾರ್ ಕಾರನ್ನು ಬಾಡಿಗೆ ಹೊಡೆದು ಬದುಕು ಕಟ್ಟಿಕೊಂಡಿದ್ದರು. ಕಳೆದ 1 ವರ್ಷದ ಹಿಂದೆ ಫೈರೋಜಾ ಅಲಿ ಹಾಗೂ ಅವರ ತಾಯಿ ರುಕ್ಸನಾ ಬೇಗಂ ನಡುವೆ ವೈಮನಸ್ಸು ಕಾಣಿಸಿಕೊಂಡಿತು. ಈ ಇಬ್ಬರು ಪರಸ್ಪರ ಮಾತನಾಡುವುದನ್ನು ಬಿಟ್ಟರು.
ಈ ವೇಳೆ `ತನ್ನ ಕಾರು ತನಗೆ ಮರಳಿಸು’ ಎಂದು ಫೈರೋಜಾ ಅಲಿ ಆಸೀಪ್ ಸೌದಗಾರ್ ಅವರನ್ನು ಕೇಳಿದರು. ಇದಕ್ಕೆ ಒಪ್ಪದ ಆಸೀಪ್ `ಆ ಕಾರನ್ನು 10 ಲಕ್ಷ ರೂಪಾಯಿಗೆ ನಾನು ಖರೀದಿಸಿದ್ದೇನೆ. ಅದರ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದೇನೆ’ ಎಂದು ಉತ್ತರಿಸಿದರು. `ನಾನು ಕಾರು ಮಾರಾಟ ಮಾಡಿಲ್ಲ. ಅದರ ಚಲಾವಣೆಗೆ ಮಾತ್ರ ಕೊಟ್ಟಿದ್ದು’ ಎಂದು ಫೈರೋಜಾ ಅಲಿ ಹೇಳಿದರು.
ಇದಕ್ಕೆ ಆಸೀಪ್ ಸೌದಗಾರ್ ಒಪ್ಪದೇ ಇದ್ದಾಗ `ತಾಯಿ ರುಕ್ಸೆನಾ ಹಾಗೂ ಆಸೀಪ್ ಸೌದಗಾರ್ ಸೇರಿ 10 ಲಕ್ಷ ರೂ ಮೌಲ್ಯದ ಕಾರನ್ನು ತನ್ನಿಂದ ಕಿತ್ತುಕೊಂಡಿದ್ದಾರೆ. ಆ ಕಾರನ್ನು ಮರಳಿಸುತ್ತಿಲ್ಲ’ ಎಂದು ಫೈರೋಜಾ ಅಲಿ ದಾಂಡೇಲಿ ಪೊಲೀಸ್ ಠಾಣೆಗೆ ದೂರು ನೀಡಿದರು.
ಫ್ಲೈ ಓವರ್ ಕೆಳಗೆ ಮಟ್ಕಾ ಜೋರು!
ಕಾರವಾರ ಮಾರ್ಗವಾಗಿ ಕರ್ನಾಟಕದಿಂದ ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಅಡಿಭಾಗದಲ್ಲಿ ಮಟ್ಕಾ ಆಡಿಸುವವನನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಿನ್ನರದ ಕೃಷ್ಣ ಕೋಠಾರಕರ್ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ.
ಕಾರವಾರದ ಕಿನ್ನರದ ಸಿದ್ದವಾಡದ ಕೃಷ್ಣ ಕೋಠಾರಕರ್ ಅಂಗಡಿ ವ್ಯಾಪಾರ ಮಾಡುತ್ತಾರೆ. ಇದರೊಂದಿಗೆ ಹೆಚ್ಚಿನ ಹಣ ಸಂಪಾದನೆಗಾಗಿ ಅವರು ಮಟ್ಕಾ ಆಡಿಸುವುದನ್ನು ರೂಢಿಸಿಕೊಂಡಿದ್ದಾರೆ. ಅದರoತೆ, ಏಪ್ರಿಲ್ 3ರಂದು ಅವರು ಬಿಣಗಾದ ಮೂಡಲಮಕ್ಕಿ ರಾಷ್ಟ್ರೀಯ ಹೆದ್ದಾರಿ ಅಂಡರಪಾಸ್ ಅಡಿ ಮಟ್ಕಾ ಆಡಿಸುತ್ತಿದ್ದರು. 1ರೂಪಾಯಿಗೆ 80ರೂ ನೀಡುವ ಆಮೀಷ ಒಡ್ಡಿ ಅನೇಕರಿಂದ ಹಣ ಸಂಗ್ರಹಿಸಿದ್ದರು. ಆ ದಿನ ಅವರು ಮಟ್ಕಾ ಆಟದಿಂದಲೇ 695ರೂ ಹಣಗಳಿಸಿದ್ದರು.
ಈ ವಿಷಯ ಅರಿತ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಉಪನಿರೀಕ್ಷಕ ನೇಹಾಲ್ ಖಾನ್ ಅಲ್ಲಿಗೆ ತೆರಳಿ ವಿಚಾರಿಸಿದರು. ಆಗ, ಮಟ್ಕಾ ಸಾಮಗ್ರಿಗಳ ಜೊತೆ ಕೃಷ್ಣ ಕೋಠಾರಕರ್ ಕಾಣಿಸಿಕೊಂಡರು. ತಕ್ಷಣ ಅವರನ್ನು ವಶಕ್ಕೆಪಡೆದು ಹಣ ಹಾಗೂ ಮಟ್ಕಾ ಸಾಮಗ್ರಿಗಳನ್ನು ಪೊಲೀಸರು ಜಪ್ತು ಮಾಡಿದರು. ಕಾನೂನುಬಾಹಿರ ಕ್ರೀಡೆ ಆಡಿಸಿದ ಕಾರಣ ಪ್ರಕರಣ ದಾಖಲಿಸಿದರು.







