ಚಲಿಸುತ್ತಿದ್ದ ಕಾರಿನಲ್ಲಿ ಸ್ಟಂಟ್ ಮಾಡಿದ ಕಾರಣ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಏಳು ಜನರ ವಿರುದ್ಧ ಸೂಳ್ಯ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಏಪ್ರಿಲ್ 5ರಂದು ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಹಂಚಿಕೊoಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಭಾರೀ ಪ್ರಮಾಣದಲ್ಲಿ ವೈರಲ್ ಆಗಿತ್ತು. ಆ ವಿಡಿಯೋ ನೋಡಿದ ಪೊಲೀಸರು ಭಟ್ಕಳದ ಆರು ಜನರಿಗೆ ಬಿಸಿ ಮುಟ್ಟಿಸಿದರು. ಅಪಾಯಕಾರಿ ರೀತಿಯಲ್ಲಿ ಕಾರು ಚಾಲನೆ ಮಾಡಿದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದ ಗೂನಡ್ಕ ಬಳಿ ಆ ಏಳು ಜನ ಅಪಾಯಕಾರಿ ರೀತಿ ವರ್ತಿಸಿದ್ದರು. ಸಂಪಾಜೆಯಿoದ ಸುಳ್ಯಕ್ಕೆ ಹೋಗುತ್ತಿದ್ದ ಕಾರಿನ ಚಾಲಕ ಅಜಾಗರೂಕತೆಯಿಂದ ವಾಹನ ಓಡಿಸಿರುವುದು ಸೆರೆಯಾಗಿತ್ತು. ಇಬ್ಬರು ಕಾರಿನ ಸನ್ರೂಪ್ ತೆರೆದು ನಿಂತಿರುವುದು ಹಾಗೂ ಉಳಿದ ನಾಲ್ವರು ಕಾರಿನ ಬಾಗಿಲು ತೆರೆದು ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು.
ಈ ವಿಡಿಯೋ ಆಧಾರದಲ್ಲಿ ಪೊಲೀಸರು ಕಾರು ಚಾಲಕ ಶಾಜಿಲ್ ಮತ್ತು ಅವರ ಆರು ಸ್ನೇಹಿತರಾದ ಅತಿಶ್, ಶಮನ್, ಜಯೇಶ್, ಸಾಜಿಬ್, ಸಾಹಿಬ್ಜ್ ಮತ್ತು ಹಸನ್ ವಿರುದ್ಧ ಕ್ರಮ ಜರುಗಿಸಿದರು. ವಿಚಾರಣೆ ವೇಳೆ ಈ ಏಳು ಜನ ಮಡಿಕೇರಿ ಪ್ರವಾಸಕ್ಕೆ ಹೋದ ಬಗ್ಗೆ ತಿಳಿಸಿದ್ದಾರೆ. ಭಟ್ಕಳಕ್ಕೆ ಮರಳುವಾಗ `ರೀಲ್ಸ್’ ಮಾಡುವುದಕ್ಕಾಗಿ ಅಪಾಯಕಾರಿ ರೀತಿ ಕಾರು ಚಲಾಯಿಸಿದನ್ನು ಒಪ್ಪಿಕೊಂಡಿದ್ದಾರೆ.
ಪ್ರವಾಸಿಗರಿದ್ದ ಬಸ್ಸು ಪಲ್ಟಿ: ಹಲವರಿಗೆ ಗಾಯ
ಮೈಸೂರಿನಿಂದ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಬಸ್ಸು ಹೊನ್ನಾವರದ ಗೇರುಸೊಪ್ಪದ ಬಳಿ ಪಲ್ಟಿಯಾಗಿದೆ.
ಶನಿವಾರ ರಾತ್ರಿ ನಡೆದ ಈ ಅಪಘಾತದಲ್ಲಿ 15ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಸುಳೆಮುರ್ಖಿ ತಿರುವಿನಲ್ಲಿ ಬಸ್ಸು ಹೆದ್ದಾರಿ ಪಕ್ಕ ಉರುಳಿ ಬಿದ್ದಿದೆ. 51 ಪ್ರವಾಸಿಗರು ಈ ಬಸ್ಸಿನಲ್ಲಿದ್ದರು. ಗಾಯಗೊಂಡವರನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಗಾಯಗೊಂಡವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಂಭೀರ ಗಾಯಗೊಂಡವರನ್ನು ಬೇರೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಈ ಬಸ್ಸಿನಲ್ಲಿದ್ದವರು ಮೈಸೂರು ಪ್ರವಾಸಕ್ಕೆ ಹೋಗಿದ್ದರು. ಎಲ್ಲರೂ ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತ: ಮದ್ಯ ವಯಸ್ಕ ಮಹಿಳೆ ಸಾವು!
ಶಿರಸಿಯ ಬನವಾಸಿ ಬಳಿ ಭಾನುವಾರ ನಡೆದು ಹೋಗುತ್ತಿದ್ದ ಮಹಿಳೆಗೆ ರಿಕ್ಷಾ ಗುದ್ದಿದೆ. ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಭಾನುವಾರ ಮಧ್ಯಾಹ್ನ ಬನವಾಸಿ ರಸ್ತೆಯ ನಿರ್ಮಲಾ ನಗರದ ಬಳಿ ಮಹಿಳೆಯೊಬ್ಬರು ನಡೆದು ಹೋಗುತ್ತಿದ್ದರು. ಜೋರಾಗಿ ಬಂದ ಲಗೇಜ್ ರಿಕ್ಷಾ ಮೊದಲ ಕ್ರಾಸಿನ ಬಳಿ ಅವರಿಗೆ ಡಿಕ್ಕಿ ಹೊಡೆಯಿತು.
ಅಪಘಾತದ ರಭಸಕ್ಕೆ ಮಹಿಳೆ ಕೆಲ ದೂರ ಹಾರಿ ಬಿದ್ದಿದ್ದು, ಅಲ್ಲಿಯೇ ಸಾವನಪ್ಪಿದರು. ಅನ್ನಪೂರ್ಣ ದುರ್ಗಾ ಎಂಬಾತರು ಸಾವನಪ್ಪಿದವರಾಗಿದ್ದಾರೆ. ಅಪಘಾತಕ್ಕೆ ಕಾರಣರಾದ ಆಟೋ ಚಾಲಕ ರಾಮನಬೈಲಿನ ಉಮೇಶ ಶೆಟ್ಟಿ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.







