ಮಾಂಸಕ್ಕಾಗಿ ಗರ್ಭಿಣಿ ಹಸುವನ್ನು ಕಡಿದ ದುರುಳರು ಹೊಟ್ಟೆಯಲ್ಲಿದ್ದ ಕರುವನ್ನು ಬಗೆದು ಬಿಸಾಡಿದ್ದಾರೆ. ಭಟ್ಕಳದ ಹೆಬಳೆ ವೆಂಕಟಾಪುರ ನದಿ ಅಂಚಿನಲ್ಲಿ ಗೋಣಿ ಚೀಲದಲ್ಲಿ ಸುತ್ತಿದ ಹಸುವಿನ ಕರು ಪತ್ತೆಯಾಗಿದೆ.
ಬೀದಿ ನಾಯಿ ಗೋಣಿ ಚೀಲ ಎಳೆಯುತ್ತಿರುವಾಗ ಆಕಳ ಕರು ಹೊರ ಬಂದಿದೆ. ಹೀಗಾಗಿ ದುರುಳರ ಕೃತ್ಯ ಬಯಲಾಗಿದೆ. ನದಿ ಅಂಚಿನಲ್ಲಿ ಕರು ಸಾವನಪ್ಪಿರುವ ಸುದ್ದಿ ತಿಳಿದು ಗುರುವಾರ ಪೊಲೀಸರು ಭೇಟಿ ನೀಡಿದರು. ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದರು.
ಜನವರಿ ತಿಂಗಳಿನಲ್ಲಿ ಹೊನ್ನಾವರದಲ್ಲಿ ಸಹ ಗರ್ಭಿಣಿ ಹಸುವನ್ನು ದುರುಳರು ಕೊಂದಿದ್ದರು. ಮೇವಿಗೆ ತೆರಳಿದ ಜಾನುವಾರನ್ನು ಕೊಂದು ಮದುವೆ ಊಟಕ್ಕೆ ಮಾಂಸ ಕಳುಹಿಸುವ ತಯಾರಿ ನಡೆಸಿದ್ದರು. ಈ ಪ್ರಕರಣ ರಾಜ್ಯದ ಎಲ್ಲಡೆ ಸುದ್ದಿ ಮಾಡಿದ್ದು, ಪೊಲೀಸರು ಆರೋಪಿತರನ್ನು ಬಂಧಿಸಿದ್ದರು.
ಅದರ ಬೆನ್ನಲ್ಲೆ ಇದೀಗ ಭಟ್ಕಳದಲ್ಲಿ ಮತ್ತೊಂದು ಗೋ ಹತ್ಯೆ ಬೆಳಕಿಗೆ ಬಂದಿದೆ. ಇಲ್ಲಿಯೂ ಗರ್ಭಿಣಿ ಹಸುವನ್ನು ಕೊಂದ ಬಗ್ಗೆ ವ್ಯಾಪಕ ಆಕ್ರೋಶವ್ಯಕ್ತವಾಗಿದೆ. `ತಪ್ಪಿತಸ್ಥರನ್ನು ಹುಡುಕಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಜನ ಒತ್ತಾಯಿಸುತ್ತಿದ್ದಾರೆ.