ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಅರಬ್ಬಿ ಸಮುದ್ರದ ಅಬ್ಬರ, ಏಕಾಏಕಿ ಬೀಸುವ ಗಾಳಿಯಿಂದಾಗಿ ಕಡಲ ತೀರದಲ್ಲಿನ ವಾತಾವರಣದಲ್ಲಿ ಏರುಪೇರಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಸಹ ಕಡಲ ಕೊರೆತ ಮುಂದುವರೆದಿದ್ದು, ಸಮುದ್ರದ ಅಂಚಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿರುವವರಲ್ಲಿ ನಡುಕ ಶುರುವಾಗಿದೆ. ಜೊತೆಗೆ ಸಮುದ್ರ ಅಂಚಿನಲ್ಲಿ ಹಾದು ಹೋಗಿರುವ ರಸ್ತೆಗಳು ಸಹ ನೀರು ಪಾಲಾಗುತ್ತಿದೆ.
ಕಾರವಾರದ ಮಾಜಾಳಿ, ಕುಮಟಾದ ಗೋಕರ್ಣ, ಅಂಕೋಲಾದ ಕೆಲವು ಕಡೆ ಕಡಲ ಕೊರೆತ ಉಂಟಾಗಿದೆ. ಹೊನ್ನಾವರ – ಭಟ್ಕಳ ಪ್ರದೇಶ ಸಹ ಇದರಿಂದ ಹೊರತಾಗಿಲ್ಲ. ಕಡಲ ಕೊರೆತ ತಡೆಗೆ ಸರ್ಕಾರ ತಡೆಗೋಡೆ ನಿರ್ಮಿಸಲು ಕೋಟ್ಯಂತರ ರೂ ವೆಚ್ಚ ಮಾಡಿದರೂ ಆ ಹಣ ಸಾಲುತ್ತಿಲ್ಲ. ಕಡಲ ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕು ಎಂಬುದು ಕರಾವಳಿಗರ ಬಹುವರ್ಷದ ಬೇಡಿಕೆ. ಅಪಾಯದ ಅಂಚಿನಲ್ಲಿರುವ ಕಾರಣ ಅನೇಕ ಬಾರಿ ಸಮುದ್ರದ ಅಂಚಿನಲ್ಲಿರುವ ಗುಡಿಸಲುಗಳನ್ನು ಜಿಲ್ಲಾಡಳಿತ ತೆರವು ಮಾಡುವ ಪ್ರಯತ್ನವನ್ನು ನಡೆಸಿತ್ತು. ಆದರೆ, ಅನಿವಾರ್ಯವಾಗಿ ಮೀನುಗಾರರು ಅಲ್ಲಿಯೇ ಇದ್ದರು. ಪ್ರಸ್ತುತ ಮೀನುಗಾರಿಕೆ ನಡೆಸಲು ತಡೆ ಇರುವುದರಿಂದ ಕಡಲತಡಿಗಳಲ್ಲಿ ಯಾರೂ ವಾಸಿಸುತ್ತಿಲ್ಲ. ಆದರೂ, ಕಡಲ ಕೊರೆತ ಉಲ್ಬಣಗೊಂಡಲ್ಲಿ ಮೀನುಗಾರರು ನಿರ್ಮಿಸಿದ ಚಿಕ್ಕಪುಟ್ಟ ಗುಡಿಸಲು ಹಾಗೂ ಅದರ ಒಳಗಿರಿಸಿದ ಸಾಮಗ್ರಿಗಳು ಸಮುದ್ರ ಪಾಲಾಗುವ ಸಾಧ್ಯತೆಗಳಿವೆ.





Discussion about this post