ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿಗಳ ಮನೆಯಲ್ಲಿ ಪದೇ ಪದೇ ಕಳ್ಳತನವಾಗುತ್ತಿದೆ. ಕಾರವಾರದ ಮಲ್ಲಾಪುರದಲ್ಲಿರುವ ಟೌನ್ಶಿಪ್ ಒಳಗೆ ನುಗ್ಗುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾರೆ.
ಏಪ್ರಿಲ್ 20ರಂದು ಊರಿಗೆ ಹೋಗಿದ್ದ ಕೈಗಾ ಉದ್ಯೋಗಿ ವಿ ಗಣೇಶ ಸುಬ್ರಹ್ಮಣ್ಯನ್ ಅವರ ಮನೆಯಲ್ಲಿ ಏ 27ರಂದು ಕಳ್ಳತನ ನಡೆದಿರುವುದು ಅರಿವಿಗೆ ಬಂದಿತ್ತು. ಆ ವೇಳೆ 55 ಸಾವಿರ ರೂ ಹಣ ಮಾತ್ರ ಕಳ್ಳತನ ನಡೆದಿರುವ ಬಗ್ಗೆ ಗಣೇಶ ಅವರ ಸ್ನೇಹಿತ ಹರೀಶ ಅವರು ಪೊಲೀಸ್ ದೂರು ನೀಡಿದ್ದರು. ಮೇ 8ರಂದು ವಿ ಗಣೇಶ ಸುಬ್ರಹ್ಮಣ್ಯನ್ ಅವರು ಮನೆಗೆ ಮರಳಿದ್ದು, ಆಗ ಮನೆಯಲ್ಲಿದ್ದ ಚಿನ್ನಾಭರಣಗಳ ಜೊತೆ ಇನ್ನಷ್ಟು ಹಣ ನಾಪತ್ತೆ ಆಗಿರುವುದು ಗೊತ್ತಾಗಿದೆ.
ವಿ ಗಣೇಶ ಸುಬ್ರಹ್ಮಣ್ಯನ್ ಅವರು ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದರು. ಆದರೆ, ಸಿ ಎಸ್ ಹರೀಶ ಅವರು ಕೈಗಾ ಟೌನ್ಶಿಪ್ಪಿನಲ್ಲಿರುವ ಅವರ ಮನೆ ಬಳಿ ತೆರಳಿದಾಗ ಮನೆ ಬಾಗಿಲು ತೆರೆದಿತ್ತು. ಏಪ್ರಿಲ್ 27ರಂದು ಕಳ್ಳತನ ನಡೆದ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೇ 8ರಂದು ವಿ ಗಣೇಶ ಸುಬ್ರಹ್ಮಣ್ಯನ್ ಅವರು ಮನೆಗೆ ಬಂದಾಗ 4.3 ಲಕ್ಷ ರೂ ಮೌಲ್ಯದ ಬಂಗಾರವೂ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಇದರೊಂದಿಗೆ 42 ಸಾವಿರ ರೂ ಮೌಲ್ಯದ ಬೆಳ್ಳಿ ಆಭರಣವನ್ನು ಕಳ್ಳರು ಅಪಹರಿಸಿದ್ದಾರೆ. ಜೊತೆಗೆ ಮನೆಯಲ್ಲಿದ್ದ 56115ರೂ ಹಣವೂ ಕಳ್ಳರ ಪಾಲಾಗಿದೆ.
ಈ ಹಿನ್ನಲೆ ವಿ ಗಣೇಶ ಸುಬ್ರಹ್ಮಣ್ಯನ್ ಅವರು ಮತ್ತೆ ಮಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ಕಾಣೆಯಾದ ವಸ್ತುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳ್ಳನನ್ನು ಹುಡುಕಿ, ತಮ್ಮ ಆಸ್ತಿ ಮರಳಿಸಿ ಎಂದವರು ಮನವಿ ಮಾಡಿದ್ದಾರೆ.
ಗಮನಿಸಿ: ಮನೆ ಬಿಟ್ಟು ಹೋಗುವಾಗ ಪೊಲೀಸರಿಗೆ ಮಾಹಿತಿ ನೀಡಿ







