ಹೊನ್ನಾವರದ ಚಂದಾವರ ಹೊಳೆಯಲ್ಲಿ ಶವ ಕಂಡ ಆ ಊರಿನ ನಾಯಿಗಳು ಸಾವನಪ್ಪಿದವರ ಸಂಬoಧಿಕರಿಗೆ ವಿಷಯ ಮುಟ್ಟಿಸಿವೆ. ಊರಿನವರು ಹೋಗಿ ನೋಡಿದಾಗ ಅದೇ ಊರಿನ ಗುರುನಾಥ ದೇಶಭಂಡಾರಿ ಸಾವನಪ್ಪಿರುವುದು ಗೊತ್ತಾಗಿದೆ.
ಹೊನ್ನಾವರದ ಮಲ್ಲಾಪುರ ಬಳಿಯ ಚಂದಾವರದಲ್ಲಿ ವಿದ್ಯಾಧರ ದೇಶಭಂಡಾರಿ ಹಾಗೂ ಗುರುನಾಥ ದೇಶಭಂಡಾರಿ ಎಂಬ ಸಹೋದರರು ಒಂದೇ ಮನೆಯಲ್ಲಿ ಎರಡು ಭಾಗ ಮಾಡಿಕೊಂಡು ವಾಸವಾಗಿದ್ದರು. ವಿದ್ಯಾಧರ ದೇಶಭಂಡಾರಿ ಅವರು ತಮ್ಮ ಪತ್ನಿ ಪುಷ್ಪಾ, ಮಕ್ಕಳಾದ ವಿಶಾಲ ಹಾಗೂ ದಿಶಾ ಜೊತೆ ಬದುಕು ಕಟ್ಟಿಕೊಂಡಿದ್ದರು. ಗುರುನಾಥ ದೇಶಭಂಡಾರಿ ಅವರು ಗೀತಾ ದೇಶಭಂಡಾರಿ ಅವರನ್ನು ವಿವಾಹವಾಗಿದ್ದು, 29 ವರ್ಷಗಳ ಹಿಂದೆಯೇ ಗೀತಾ ಅವರು ತಮ್ಮ ಮೂರು ಮಕ್ಕಳೊಂದಿಗೆ ಬೇರೆ ಊರಿಗೆ ಹೋಗಿ ಬದುಕು ಕಟ್ಟಿಕೊಂಡಿದ್ದರು. ಹೀಗಾಗಿ ಗುರುನಾಥ ದೇಶಭಂಡಾರಿ ಏಕಾಂಗಿಯಾಗಿದ್ದರು.
ಗುರುನಾಥ ದೇಶಭಂಡಾರಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ ಮದ್ಯ ವ್ಯಸನಿಯಾಗಿದ್ದರು. ರಾತ್ರಿ ವೇಳೆಯಲ್ಲಿಯೂ ಮನೆಯಿಂದ ಹೊರ ಹೋಗಿ ಮನಸ್ಸಿಗೆ ಬಂದಾಗ ಮರಳುತ್ತಿದ್ದರು. ಮಾ 7ರ ಸಂಜೆ ಮನೆಯಿಂದ ಹೊರಹೋದ ಅವರು ಎರಡು ದಿನವಾದರೂ ಮರಳಿರಲಿಲ್ಲ. ಪರಿಚಯಸ್ಥರ ಬಳಿ ಅವರ ಸಹೋಧರ ವಿದ್ಯಾಧರ ದೇಶಭಂಡಾರಿ ವಿಚಾರಿಸಿದರೂ ಗುರುನಾಥ ಅವರ ಸುಳಿವು ಸಿಕ್ಕಿರಲಿಲ್ಲ.
ಮೇ 11ರಂದು ಜೋರಾಗಿ ನಾಯಿ ಬೊಗಳುತ್ತಿದ್ದವು. ವಿದ್ಯಾಧರ ದೇಶಭಂಡಾರಿ ಅವರ ಅಕ್ಕನ ಮಗ ಗಜಾನನ ದೇಶಭಂಡಾರಿ ಅವರನ್ನು ಆ ನಾಯಿಗಳು ಹೊಳೆ ಕಡೆ ಕರೆದುಕೊಂಡು ಹೋದವು. ಹೊಳೆಯಲ್ಲಿ ಅಡ್ಡಲಾಗಿ ಮಲಗಿದ ಶವವನ್ನು ತೋರಿಸಿದವು. ಹತ್ತಿರ ಹೋಗಿ ನೋಡಿದಾಗ ಗುರುನಾಥ ದೇಶಭಂಡಾರಿ ಶವವಾಗಿರುವುದು ಗಜಾನನ ದೇಶಭಂಡಾರಿ ಅವರಿಗೆ ಅರಿವಾಯಿತು. ಅದಾದ ನಂತರ ವಿದ್ಯಾಧರ ದೇಶಭಂಡಾರಿ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು. ಗುರುನಾಥ ದೇಶಭಂಡಾರಿ ಅವರ ಕುಟುಂಬದವರಿಗೂ ವಿಷಯ ಮುಟ್ಟಿಸಿದರು.







