ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸಿದ ಹಿನ್ನಲೆ ವಿಜಯನಗರದ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20ರಂದು `ಪ್ರಗತಿಯತ್ತ ಕರ್ನಾಟಕ- ಸಮಪರ್ಣೆ ಸಂಕಲ್ಪ’ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರಡಿಸಿದ ಜಾಹೀರಾತು ಪ್ರಕಟಣೆಯ ಅಂದ-ಚoದದ ವರ್ಣನೆ ವಿವಿಧ ಪತ್ರಿಕೆಗಳ ತೇಜಸ್ಸು ಹೆಚ್ಚಿಸಿದೆ.
ಸಾಮಾನ್ಯವಾಗಿ ಸರ್ಕಾರಿ ಜಾಹೀರಾತುಗಳು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಫೊಟೊ, ಕಾರ್ಯಕ್ರಮದ ಮಾಹಿತಿಗಳನ್ನು ಒಳಗೊಂಡಿರುತ್ತವೆ. ಆದರೆ, ಈ ದಿನ `ಗ್ಯಾರಂಟಿ ಬದುಕು’ ಹೆಸರಿನಲ್ಲಿ ಪ್ರಕಟಗೊಂಡ ಜಾಹೀರಾತು ವಿನ್ಯಾಸ ಗಮನಸೆಳೆದಿದೆ.
ಶಕ್ತಿ ಯೋಜನೆಗೆ ಸಂಬoಧಿಸಿದoತೆ ಪ್ರಕಟಗೊಂಡಿರುವ ಈ ಜಾಹೀರಾತುವಿನಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವಿದೆ. ಅದರೊಂದಿಗೆ ಕರ್ನಾಟಕದ ನಕಾಶೆ ಇದೆ. ಈ ನಕಾಶೆಯೊಳಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಫೊಟೊಗಳನ್ನು ಅವರವರ ಹೆಸರಿನ ಜೊತೆ ಬಳಸಲಾಗಿದೆ. ಅದರಲ್ಲಿಯೂ ಮುಖ್ಯವಾಗಿ ಫಲಾನುಭವಿಗಳ ಪಕ್ಕದಲ್ಲಿ ಕ್ಯೂಆರ್ ಕೋಡ್ಗಳನ್ನು ನೀಡಲಾಗಿದ್ದು, ಈ ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮಾಡಿದಲ್ಲಿ ನೇರವಾಗಿ ಕರ್ನಾಟಕ ವಾರ್ತೆಯ ಯೂಟ್ಯೂಬ್ ಚಾನೆಲ್ ತೆರೆಯುತ್ತದೆ.
ಆ ಮೂಲಕ ಗ್ಯಾರಂಟಿಗಳಿoದ ಪ್ರಯೋಜನ ಪಡೆದ ಫಲಾನುಭವಿಗಳ ಅನಿಸಿಕೆಯ ವಿಡಿಯೋ ನೋಡುವ ಅವಕಾಶವನ್ನು ಇಲ್ಲಿ ನೀಡಲಾಗಿದೆ. ಸದ್ಯ ಐವರು ಫಲಾನುಭವಿಗಳ ಯಶೋಗಾಥೆಯನ್ನು ಇಲ್ಲಿ ಕ್ಯೂಆರ್ ಕೋಡ್ ಮೂಲಕ ಪ್ರಸ್ತುತಪಡಿಸಲಾಗಿದ್ದು, ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿ ಯೋಜನೆಗಳ ಕುರಿತಾಗಿ ಸಾಹಿತ್ಯಿಕವಾಗಿ ಮಾತನಾಡಿರುವ ಧ್ವನಿ ಸಂದೇಶವನ್ನಿರಿಸಲಾಗಿದೆ.
ಈ ಎಲ್ಲಾ ಫಲಾನುಭವಿಗಳು ರಾಜ್ಯದ ವಿವಿಧೆಡೆಯವರಾಗಿದ್ದು, ಗ್ಯಾರಂಟಿ ಯೋಜನೆಗಳು ಹೇಗೆ ನೆರವಾಗಿದೆ? ಎನ್ನುವುದನ್ನು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಸಿದ್ದರಾಮಯ್ಯನವರಿಗೆ ಫಲಾನುಭವಿಗಳು ಧನ್ಯವಾದ ತಿಳಿಸಿದ್ದಾರೆ. ವಾರ್ತಾ ಇಲಾಖೆಯ ಈ ಜಾಹೀರಾತು ಸದ್ಯ ಎಲ್ಲರ ಕಣ್ಮನ ಸೆಳೆದಿದ್ದು, ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕೆ ಇಲಾಖೆ ನಡೆಸಿರುವ ಈ ವಿಶೇಷ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ.
ಮುಖ್ಯಮಂತ್ರಿ ಸಂದೇಶ
‘ನಮ್ಮ ಐದು ವಾಗ್ದಾನಗಳು ಕೇವಲ ಮಾತಲ್ಲ,
ಬದಲಾವಣೆಯ ಮಂತ್ರ.
ಶಕ್ತಿಯಿoದ ಹೆಣ್ಣುಮಕ್ಕಳು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ,
ತಮ್ಮ ಕನಸುಗಳ ಬೆನ್ನೇರಿ ಸಾಗುತ್ತಿದ್ದಾರೆ.
ಅನ್ನಭಾಗ್ಯದಿಂದ ಹಸಿವಿನ ಚಿಂತೆ ದೂರವಾಗಿದೆ,
ಎಲ್ಲರೂ ನೆಮ್ಮದಿಯಿಂದ ಮೂರ್ಹೊತ್ತು ಉಣ್ಣುತ್ತಿದ್ದಾರೆ.
ಗೃಹಜ್ಯೋತಿಯಿಂದ ಬಡವರ ಮನೆ ಬೆಳಗುತ್ತಿದೆ,
ಕರೆಂಟ್ ಬಿಲ್ ಎಂಬ ಆರ್ಥಿಕ ಹೊರೆ ಇಳಿದಿದೆ.
ಗೃಹಲಕ್ಷ್ಮಿಯಿಂದ ಮನೆಯೊಡತಿಯ ಕೈ ಬಲಗೊಂಡಿದೆ,
ಕುಟುಂಬದ ನಿರ್ವಹಣೆಗೆ ಆರ್ಥಿಕ ಶಕ್ತಿ ಪಡೆದಿದ್ದಾಳೆ.
ಯುವನಿಧಿಯಿಂದ ಯುವಜನರಲ್ಲಿ ಕನಸುಗಳು ಚಿಗಿರೊಡೆದಿದೆ,
ಉದ್ಯೋಗದ ಬಾಗಿಲು ತೆರೆದಿದೆ.
ಇವು ನಮ್ಮ ಹೆಮ್ಮೆಯ ಯೋಜನೆಗಳು,
ಕರುನಾಡಿನ ಪ್ರತಿಯೊಬ್ಬರ ಬದುಕಿನಲ್ಲಿಯೂ ಬದಲಾವಣೆ ತಂದ ನಮ್ಮ ಗ್ಯಾರಂಟಿಗಳು;
ಇದುವೇ ಗ್ಯಾರಂಟಿ ಬದುಕು’ ಎಂದು ಸಿಎಂ ಸಿದ್ದರಾಮಯ್ಯನವರು ಧ್ವನಿ ಸಂದೇಶದಲ್ಲಿ ತಿಳಿಸಿದ್ದಾರೆ.
ಶಕ್ತಿ ತುಂಬಿದ ಶಕ್ತಿ ಯೋಜನೆ
ಶಕ್ತಿ ಯೋಜನೆಯೂ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾಗಿದ್ದು, ಸಾರಿಗೆ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ. ಈವರೆಗೆ ನಾಡಿನ ಮಹಿಳೆಯರು ಶಕ್ತಿ ಯೋಜನೆಯಡಿ 455 ಕೋಟಿಗೂ ಅಧಿಕ ಉಚಿತ ಪ್ರಯಾಣ ಮಾಡಿದ್ದು, 11,403 ಕೋಟಿ ರೂ.ಗಳನ್ನು ಈವರೆಗೆ ಸರ್ಕಾರ ಇದಕ್ಕಾಗಿ ವ್ಯಯಿಸಿದೆ.