ಉತ್ತಮ ಸಂಘಟನೆಯ ಮೂಲಕ ಜಿಲ್ಲೆಯ ಗಮನ ಸೆಳೆದಿರುವ ಯಲ್ಲಾಪುರದ ಶ್ರಾವಣ ಯಕ್ಷ ಸಂಭ್ರಮಕ್ಕೆ ಈ ಬಾರಿ ದಶಮಾನೋತ್ಸವದ ಸಂಭ್ರಮ. ಅಪರೂಪದ ಸಂಯೋಜನೆಯೊಂದಿಗೆ ದಶಮ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ಬರುವ ಆಗಸ್ಟ್ 23 ರಂದು ಕಾರ್ಮಿಕ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.
9 ವರ್ಷಗಳ ಹಿಂದೆ ಆರಂಭವಾದ ಈ ಸಂಘಟನೆ, ಜಿಲ್ಲೆಯಲ್ಲೇ ಉತ್ತಮ ಸಂಘಟನೆಗಳಲ್ಲೊಂದಾಗಿ ಬೆಳೆದದ್ದು ಒಂದು ಯಶೋಗಾಥೆ.
ಸುಬ್ಬಣ್ಣ ಕಂಚಗಲ್ ಅವರ ತಂದೆ ಶಿವರಾಮ ಭಟ್ಟ ಕಂಚಗಲ್ ಯಕ್ಷಗಾನದ ಅಪ್ಪಟ ಅಭಿಮಾನಿ, ಸಂಘಟಕರೂ ಹೌದು. ಮನೆಯಲ್ಲೇ ತಾಳಮದ್ದಲೆ, ಯಕ್ಷಗಾನಗಳ ಸಂಘಟನೆಯನ್ನು ಎರಡು ದಶಕಗಳ ಕಾಲ ಮಾಡಿದವರು. ಮನೆಯಲ್ಲಿ ಕಲೆಯ ಮೇಲಿನ ಅಭಿಮಾನ, ಸಂಘಟನೆಯ ವಾತಾವರಣದ ಪ್ರೇರಣೆಯಿಂದ ಸುಬ್ಬಣ್ಣ ಸಹ ಸಂಘಟನೆಯಲ್ಲಿ ತೊಡಗಿಕೊಂಡರು.
ಶ್ರಾವಣ ಸಂಭ್ರಮ ಶೀರ್ಷಿಕೆಯಡಿ ಮೊದಲ ಕಾರ್ಯಕ್ರಮ ಸಂಘಟಿಸಲು ಮಂಜುನಾಥ ಭಟ್ಟ ಕಂಚಗಲ್, ಕೃಷ್ಣ ಭಟ್ಟ ಕೂಗಲೆ ಕಾರಣರಾದರು. ಅಲ್ಲಿಂದ ಮುಂದೆ ನಾಲ್ಕು ವರ್ಷಗಳ ಕಾಲ ಸುಬ್ಬಣ್ಣ ಏಕಾಂಗಿಯಾಗಿ ಕಾರ್ಯಕ್ರಮ ಸಂಘಟಿಸಿದರು. 2022 ರಿಂದ ರಾಘವೇಂದ್ರ ಬೆಳಸೂರು ಹಾಗೂ ಮಿತ್ರವೃಂದದವರು ಸುಬ್ಬಣ್ಣ ಅವರ ಜೊತೆಯಾಗಿದ್ದಾರೆ.
ಪ್ರತಿ ವರ್ಷ ವಿಶೇಷ ಸಂಯೋಜನೆಯನ್ನು ಕಲಾಭಿಮಾನಿಗಳ ಮುಂದಿಡುವುದು ಶ್ರಾವಣ ಸಂಭ್ರಮದ ಹೆಗ್ಗಳಿಕೆ. ಶ್ರಾವಣ ಯಕ್ಷ ಸಂಭ್ರಮದಲ್ಲಿ ಕಳೆದ 9 ವರ್ಷಗಳಲ್ಲಿ 20 ಪೌರಾಣಿಕ ಪ್ರಸಂಗಗಳು ಪ್ರದರ್ಶನಗೊಂಡಿವೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ, ಬಡಗು ಹಾಗೂ ತೆಂಕು ತಿಟ್ಟುಗಳ 200 ಕ್ಕೂ ಹೆಚ್ಚು ಕಲಾವಿದರು ಪಾತ್ರ ನಿರ್ವಹಿಸಿದ್ದಾರೆ.
ಪ್ರತಿ ವರ್ಷದ ಕಾರ್ಯಕ್ರಮದಲ್ಲಿ ಸಂಘಟನೆಯಿಂದ ಸಾಧಕ ಕಲಾವಿದರನ್ನು ಸನ್ಮಾನಿಸುವ ಪರಂಪರೆಯನ್ನೂ ಬೆಳೆಸಿಕೊಂಡು ಬಂದಿದ್ದಾರೆ. ಗೋಪಾಲ ಆಚಾರ್ಯ ತೀರ್ಥಹಳ್ಳಿ, ಕೃಷ್ಣಯಾಜಿ ಬಳ್ಕೂರು, ನೀಲ್ಕೋಡ ಶಂಕರ ಹೆಗಡೆ, ಗಣಪತಿ ಭಾಗ್ವತ ಕವಾಳೆ, ಭಾಸ್ಕರ ಗಾಂವ್ಕರ ಬಿದ್ರೆಮನೆ, ಅಶೋಕ ಭಟ್ಟ ಸಿದ್ದಾಪುರ, ಅನಂತ ಹೆಗಡೆ ದಂತಳಿಗೆ ಹಾಗೂ ಕವಾಳೆ ಸಹೋದರರನ್ನು ಸನ್ಮಾನಿಸಲಾಗಿದೆ.
ವರ್ಷದಿಂದ ವರ್ಷಕ್ಕೆ ಜನಮನ್ನಣೆ ಗಳಿಸುತ್ತಿರುವ ಶ್ರಾವಣ ಯಕ್ಷ ಸಂಭ್ರಮದ ದಶಮಾನೋತ್ಸವವನ್ನು ವಿಶೇಷವಾಗಿ ಆಚರಿಸಲು ಸಂಘಟನೆ ಸಿದ್ಧವಾಗಿದೆ. ಆಗಸ್ಟ್ 23 ರ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದಶಮಾನೋತ್ಸವದ ಪ್ರಯುಕ್ತ ವಿಶೇಷ ಸಂಯೋಜನೆ ಮಾಡಲಾಗಿದ್ದು, ರತ್ನಾವತಿ ಕಲ್ಯಾಣ, ಊರ್ವಶಿ ಶಾಪ, ಮಾರುತಿ ಪ್ರತಾಪ, ಮಾರಣಾಧ್ವರ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.
ದಕ್ಷಿಣೋತ್ತರಕನ್ನಡ ಜಿಲ್ಲೆಯ 40 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ತೆಂಕು-ಬಡಗು ಕಲಾವಿದರ ಕೂಡುವಿಕೆಯ ಒಂದು ಪ್ರಸಂಗ ಇರುವುದು ವಿಶೇಷ. ತೆಂಕು-ಬಡಗುಗಳೆರಡರಲ್ಲೂ ಭಾಗವತಿಕೆಯಲ್ಲಿ ಪರಿಣಿತರಾಗಿರುವ ದಿನೇಶ ಭಟ್ಟ ಯಲ್ಲಾಪುರ ಅವರನ್ನು ಈ ಬಾರಿ ಸನ್ಮಾನಿಸಲಾಗುವುದು. ದಶಮಾನೋತ್ಸವದ ಅಂಗವಾಗಿ ಯಕ್ಷಗಾನದ ವಿವಿಧ ವಿಭಾಗಗಳ 10 ಜನರಿಗೆ ಗೌರವ ಸಮರ್ಪಣೆ ನಡೆಯಲಿದೆ.







