ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಹೊಂಡ-ಗುಂಡಿಗಳೇ ಹೆಚ್ಚಾಗಿದ್ದು, ವಾಹನ ಸವಾರರು ಬೀಳುತ್ತ ಏಳುತ್ತ ಸಾಗುವುದು ಸಾಮಾನ್ಯವಾಗಿದೆ.
ಕೆಲ ದಿನಗಳ ಹಿಂದಷ್ಟೇ ರಸ್ತೆಯ ಗುಂಡಿಯಲ್ಲಿ ಬಿದ್ದು ಗಾಯಗೊಂಡು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆ ಸೇರಿದವರೂ ಇದ್ದಾರೆ. ಇಷ್ಟಾಗಿಯೂ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಬೇಸತ್ತ ತುಡುಗುಣಿಯ ಯುವಕರು ತಾವೇ ಆ ಭಾಗದ ರಸ್ತೆ ದುರಸ್ತಿ ಮಾಡುವ ಮೂಲಕ ವ್ಯವಸ್ಥೆಗೆ ಸೆಡ್ಡು ಹೊಡೆದಿದ್ದಾರೆ.
ತುಡುಗುಣಿಯ ವಿಲಾಸ ನಾಯ್ಕ ನಾಗೇಶ ಹೆಗಡೆ, ಜಾನ್ಸನ್ ಡಿಸೋಜ್, ಸಂದೀಪ ಹೆಗಡೆ, ದರ್ಶನ ಮರಾಠಿ ಸೇರಿದಂತೆ ಕೆಲ ನಾಗರಿಕರು ಒಟ್ಟಾಗಿ ಸಮರಸ್ತೆಯ ಹೊಂಡವನ್ನು ಮುಚ್ಚಿದ್ದಾರೆ. ತಾವೇ ಜಲ್ಲಿ, ರೇತಿ, ಸಿಮೆಂಟ್ ಗಳನ್ನು ತಂದು ರಸ್ತೆಯ ಹೊಂಡ ಮುಚ್ಚಿದ್ದಾರೆ.
ಅಧಿಕಾರಿಗಳು ಮಾಡುತ್ತಾರೆ, ರಾಜಕಾರಣಿಗಳು ಮಾಡುತ್ತಾರೆ ಎಂಬುದನ್ನು ಕಾದುಕೊಂಡು ಕುಳಿತುಕೊಳ್ಳದೇ, ಈ ಹೊಂಡವನ್ನು ಮುಚ್ಚಿ ಮಾದರಿಯಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಕಣ್ಣು ತೆರೆದು ನೋಡಬಹುದೇ? ಕಾದು ನೋಡಬೇಕಿದೆ.







