ಯಲ್ಲಾಪುರ ಹಾಗೂ ಅಂಕೋಲಾ ತಾಲೂಕುಗಳನ್ನು ಸಂಪರ್ಕಿಸುವ ಗುಳ್ಳಾಪುರ – ಹೆಗ್ಗಾರ್ ನೂತನ ಸೇತುವೆ ನಿರ್ಮಾಣಕ್ಕೆ ಸುಮಾರು 35 ಕೋಟಿ ರೂಪಾಯಿ ಅನುದಾನದ ಮಂಜೂರಾತಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
4 ವರ್ಷಗಳ ಅತಂತ್ರ ಸ್ಥಿತಿ ಕೊನೆಗೊಳ್ಳುವ ಸಮಯ ಬಂದಿದೆ. ಈ ಸೇತುವೆ ನಿರ್ಮಾಣದ ಮೂಲಕ ಗ್ರಾಮೀಣ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ.
ಸೇತುವೆಗೆ ಅನುದಾನ ಮಂಜೂರಿ ಮಾಡಿಸಲು ಪ್ರಯತ್ನಿಸಿ, ಸಫಲರಾದ ಸಂತಸವನ್ನು ಹಂಚಿಕೊಂಡಿರುವ ಶಾಸಕ ಶಿವರಾಮ ಹೆಬ್ಬಾರ, ವ್ಯಾಪಾರ ಹಾಗೂ ವಾಣಿಜ್ಯ ಚಟುವಟಿಕೆಗಳು ಚೈತನ್ಯಗೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರವೇಶ ಸುಲಭವಾಗಲಿದೆ. ಆರೋಗ್ಯ ಮತ್ತು ತುರ್ತು ಸೇವೆಗಳು ತ್ವರಿತವಾಗಿ ಲಭ್ಯವಾಗುವಂತಾಗುತ್ತದೆ.
ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲು ಅನುಕೂಲವಾಗುವಷ್ಟೇ ಅಲ್ಲದೆ ಪ್ರವಾಸೋದ್ಯಮಕ್ಕೂ ಹೊಸ ದಾರಿ ತೆರೆಯಲಿದೆ. ಒಟ್ಟಾರೆ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕುಗಳ ಅಭಿವೃದ್ಧಿಗೆ ಈ ಯೋಜನೆ ಒಂದು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ವಿಶ್ಲೇಷಿಸಿದ್ದಾರೆ.
ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸೇತುವೆ ನಿರ್ಮಾಣಕ್ಕೆ ಅನುದಾನವನ್ನು ಮಂಜೂರು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಬಂಧಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.







