ಯಲ್ಲಾಪುರದ ಎಲ್ ಎಸ್ ಎಂ ಪಿ ಸೊಸೈಟಿ ಕಳೆದ ಆರ್ಥಿಕ ವರ್ಷದಲ್ಲಿ 52.06 ಲಕ್ಷ ರೂ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೇರಿ ಹೇಳಿದರು.
ಅವರು ಸಂಘದ ಸಭಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಗತಿಯ ಕುರಿತು ಮಾಹಿತಿ ನೀಡಿದರು. ಸಂಘವು 2393 ಸದಸ್ಯರನ್ನು ಹೊಂದಿದೆ. ಸಂಘ ವಾಣಿಜ್ಯ ಸಂಕೀರ್ಣ ಹೊಂದಿದ್ದು,ವ್ಯಾಪಾರಿ ಮಳಿಗೆಯಿಂದ ವಾರ್ಷಿಕವಾಗಿ 23 ಲಕ್ಷ ರೂ ಆದಾಯ ಬಂದಿದೆ. ಸೊಸೈಟಿಗೆ ಪೆಟ್ರೋಲ್ ಬಂಕ್ ಮಂಜೂರಿಯಾಗಿದ್ದು, ಆರಂಭದ ಸಿದ್ಧತೆಗಳು ನಡೆದಿವೆ ಎಂದು ವಿವರಿಸಿದರು.
ಸದಸ್ಯರು ಮರಣ ಹೊಂದಿದರೆ ಅವರ ಅಂತ್ಯಸಂಸ್ಕಾರಕ್ಕೆ ಸಹಾಯ ಮಾಡುವ ಯೋಜನೆ ಜಾರಿಯಲ್ಲಿದ್ದು, ಕಳೆದ ಸಾಲಿನಲ್ಲಿ ಸಂಘವು 15 ಜನ ಸದಸ್ಯರಿಗೆ ತಲಾ 5000 ರೂ ನಂತೆ ಅಂತ್ಯ ಸಂಸ್ಕಾರ ನಿಧಿ ನೀಡಿದೆ. ಕಳೆದ ವರ್ಷ ಸಂಘದ ಮೂಲಕ ಒಟ್ಟೂ 4 ಸಾವಿರ ಕ್ವಿಂಟಲ್ ಅಡಿಕೆ ವಿಕ್ರಿ ಆಗಿದೆ. ಅಡಿಕೆ ವಿಕ್ರಿ ಸಂಬಂಧ ಟಿಎಂಎಸ್ ನಿಂದ 30,000ರೂ ಬಹುಮಾನ ಬಂದಿದೆ ಎಂದರು.
ಮಾಧ್ಯಮಿಕ ಸಾಲವನ್ನು ಸ್ವಂತ ಬಂಡವಾಳದಿಂದ ನೀಡಲಾಗಿದೆ. ಸಾಲ ಮರುಪಾವತಿಯ ಪ್ರಮಾಣವೂ ಶೇ.94 ರಷ್ಟು ಆಗಿದೆ. ಸಂಘದ ಸದಸ್ಯರು, ಕೃಷಿ ಕಾರ್ಮಿಕರು ಕೃಷಿ ಕಾರ್ಯದಲ್ಲಿ ನಿರತರಾದಾಗ ಗಾಯಗೊಂಡರೆ ಸಹಾಯ ನೀಡಲು ಆಪತ್ತು ಠೇವು ಆರಂಭಿಸಿದ್ದು, ಸದಸ್ಯರಿಗೆ ಉಪಯುಕ್ತವಾಗಿದೆ. ಇದರಡಿಯಲ್ಲಿ ಕಳೆದ ಸಾಲಿನಲ್ಲಿ ಮೂರು ಜನರಿಗೆ 71,300 ರೂ ನೀಡಲಾಗಿದೆ ಎಂದರು.
ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಸೆ.13 ರಂದು ಮಧ್ಯಾಹ್ನ 3.30 ಕ್ಕೆ ಪಟ್ಟಣದ ಹುಲ್ಲೋರಮನೆ ಗಜಾನನ ಮಾರುತಿ ಸಭಾಭವನದಲ್ಲಿ ನಡೆಯಲಿದೆ ಎಂದರು.
ಸಂಘದ ಉಪಾಧ್ಯಕ್ಷ ಟಿ ಆರ್ ಹೆಗಡೆ,ನಿರ್ದೇಶಕರಾದ ಆರ್ ಎಸ್ ಭಟ್ಟ, ಅಪ್ಪು ಆಚಾರಿ, ಸುಬ್ಬಣ್ಣ ದಾನ್ಯಾನಕೊಪ್ಪ, ತಿಮ್ಮಣ್ಣ ಘಟ್ಟಿ, ನರಸಿಂಹ ಕೋಣೆಮನೆ, ಗಾಬ್ರಿಯಲ್ ಫರ್ನಾಂಡೀಸ್, ಹನುಮಂತ ಕೊರವರ, ಮುಖ್ಯಕಾರ್ಯನಿರ್ವಾಹಕ ಎಂ ಎಸ್ ಹೆಗಡೆ ಇದ್ದರು.







