ಯಲ್ಲಾಪುರ ತಾಲೂಕಿನ ಮದನೂರು ಗ್ರಾ.ಪಂ ವ್ಯಾಪ್ತಿಯ ಡೋಮಗೇರಿಯಲ್ಲಿ ಮರದಡಿ ಸಿಲುಕಿ ಮೃತಪಟ್ಟವರ ಮನೆಗೆ ಶಾಸಕ ಶಿವರಾಮ ಹೆಬ್ಬಾರ ಗುರುವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮೃತರಾದ ಸಾವಿತ್ರಿ ಖರಾತ್ ಹಾಗೂ ಸ್ವಾತಿ ಖರಾತ್ ಅವರ ಮನೆಗೆ ಭೇಟಿ ನೀಡಿದ ಶಾಸಕರು, ಕುಟುಂಬದವರಿಗೆ ಸಾಂತ್ವನ ಹೇಳಿ, ನೋವಿನಲ್ಲಿ ನಿಮ್ಮೊಂದಿಗೆ ನಾವಿದ್ದೇವೆ. ಸತ್ತವರನ್ನು ಮತ್ತೆ ಬದುಕಿಸಲು ಸಾಧ್ಯವಿಲ್ಲ, ಇರುವ ಮಕ್ಕಳಿಗೆ ಹೆಚ್ಚಿನ ಆಯುಷ್ಯ ಸಿಗಲೆಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದರು.
ಸರ್ಕಾರದಿಂದ ನೀಡಲಾದ ತಲಾ 5 ಲಕ್ಷ ರೂ ಪರಿಹಾರದ ಚೆಕ್ ನ್ನು ಮೃತರ ಕುಟುಂಬದವರಿಗೆ ಹಸ್ತಾಂತರಿಸಿದರು. ಜತೆಗೆ ವೈಯಕ್ತಿಕವಾಗಿಯೂ ಧನ ಸಹಾಯ ಮಾಡಿದರು.
ದುರ್ಘಟನೆಯಲ್ಲಿ ಗಾಯಗೊಂಡಿರುವ ಘಾಟು ಲಕ್ಕು ಕೊಕರೆ ಅವರ ಮನೆಗೂ ಭೇಟಿ ನೀಡಿದ ಅವರು, ಕುಟುಂಬದವರಿಗೆ ಧೈರ್ಯ ಹೇಳಿದರು. ಗಾಯಾಳುಗಳು ಗುಣಮುಖವಾಗಲು ಅಗತ್ಯವಾದ ಚಿಕಿತ್ಸೆ ಕೊಡಿಸಲು ನೆರವಾಗುವ ಭರವಸೆಯನ್ನೂ ನೀಡಿದರು.
ಉಪವಿಭಾಗಾಧಿಕಾರಿ ಕಾವ್ಯಾರಾಣಿ, ಗ್ರೇಡ್ 2 ತಹಸೀಲ್ದಾರ ಸಿ.ಜಿ.ನಾಯ್ಕ, ಜಿ.ಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ, ಪ್ರಮುಖರಾದ ಎನ್.ಕೆ.ಭಟ್ಟ, ಡಾ.ರವಿ ಭಟ್ಟ ಬರಗದ್ದೆ, ಪ್ರಶಾಂತ ಸಭಾಹಿತ, ಮಾಕು ಕೊಕರೆ ಇತರರಿದ್ದರು.







