ಮತಗಳ್ಳತನದ ಬಗ್ಗೆ ಸಾರ್ವಜನಿಕ ಸಭೆಗಳಲ್ಲಿ ಆರೋಪಿಸುವ ರಾಹುಲ್ ಗಾಂಧಿ, ಈ ಬಗ್ಗೆ ಅಧಿಕೃತ ದೂರು ಕೊಡಲು ಹಿಂದೇಟು ಹಾಕುತ್ತಿರುವುದು ನೋಡಿದರೆ, ಇದೊಂದು ಜನರನ್ನು ಮರಳು ಮಾಡುವ ರಾಜಕೀಯ ಆರೋಪ ಎನ್ನುವ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ಮುಮಡ ರಾಮು ನಾಯ್ಕಹೇಳಿದ್ದಾರೆ.
ರಾಹುಲ್ ಆರೋಪದಲ್ಲಿ ಹುರುಳೆಷ್ಟಿದೆಯೋ ಗೊತ್ತಿಲ್ಲ. ಆದರೆ ಸದ್ಯ ಈ ಯುವರಾಜನ ಅಕ್ಕಪಕ್ಕದಲ್ಲಿ ಇದ್ದವರ ಮೇಲೆ ಮಾತ್ರ ಸಾಕಷ್ಟು ಚುನಾವಣಾ ಅಕ್ರಮದ ಆರೋಪಗಳು ಕೇಳಿ ಬಂದಿರುವುದಂತೂ ಸತ್ಯ. ಬಿಹಾರದ ಆರ್.ಜೆ.ಡಿ. ಮುಖ್ಯಸ್ಥ ತೇಜಸ್ವಿ ಪ್ರಸಾದ ಕಳೆದ ಕೆಲವು ದಿನಗಳಿಂದ ರಾಹುಲ್ ಜೊತೆಗೇ ಹೆಜ್ಜೆ ಹಾಕುತ್ತಿದ್ದಾರೆ. ಈ ತೇಜಸ್ವಿ ಮೇಲೆಯೇ ನಕಲಿ ಗುರುತಿನ ಚೀಟಿ ಹೊಂದಿದ ಆರೋಪ ಇದ್ದು, ಚುನಾವಣಾ ಆಯೋಗದಿಂದ ಅಧಿಕೃತ ನೋಟಿಸೂ ನೀಡಲಾಗಿದೆ.
ಪವನ್ ಖೇರಾ ಎನ್ನುವ ಇನ್ನೊಬ್ಬ, ರಾಹುಲ್ ಗಾಂಧಿಯ ಬಲಗೈ ಬಂಟ, ದಿಲ್ಲಿ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ. ಈತನ ಮೇಲೂ ಜಂಗಪುರ್ ಹಾಗೂ ನವದೇಹಲಿ ಎರಡೂ ಕಡೆ ಮತದಾನದ ಹಕ್ಕು ಹೊಂದಿದ ಆರೋಪ ಬಂದಿದ್ದು, ಇವರಿಗೂ ನೋಟಿಸು ಜಾರಿಯಾಗಿದೆ. ಕೋಟಾ ನೀಲಿಮಾ, ತೇಲಂಗಾಣದ ಕಾಂಗ್ರೆಸ್ ಮುಖ್ಯಸ್ಥೆ. ಇವರೂ ಡಬಲ್ ಓಟಿಂಗ್ ಆರೋಪ ಎದುರಿಸುತ್ತಿದ್ದಾರೆ. ಸ್ವತಃ ರಾಹುಲ ಗಾಂಧಿಯವರ ತಾಯಿ ಸೋನಿಯಾಜೀ ಮೇಲೂ, ಭಾರತದ ಪೌರತ್ವ ಪಡೆಯುವದಕ್ಕೂ ಮೊದಲೇ ದಿಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಿದ ಆರೋಪ ಕೇಳಿ ಬಂದಿದೆ ಎಂದು ವಿವರಿಸಿದರು.
1975 ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸ್ವತಃ ಅಲಹಾಬಾದ ಹೈಕೋರ್ಟ್, ಇಂದಿರಾಗಾಂಧಿಯವರ ಚುನಾವಣಾ ಅಕ್ರಮಗಳನ್ನು ಬಯಲಿಗೆಳೆದಿದೆ. ಮೊಮ್ಮಗ ರಾಹುಲ್ ಇದನ್ನು ಮರೆತಿರಬಹುದು, ನಾವು ಮರೆತಿಲ್ಲ. 1999 ರಲ್ಲಿ ನಮ್ಮದೇ ಕ್ಷೇತ್ರದ ಪಕ್ಕದ ಮುಂಡಗೋಡಿನಲ್ಲಿ ‘ ಮತಪತ್ರ ಸುಟ್ಟ ಪ್ರಕರಣ’ ಕಾಂಗ್ರೆಸ್ ಮೇಲೆ ಎರಗಿತ್ತು. ಅದನ್ನು ಹೇಗೇಗೋ ಮುಗಿಸಿ ಹಾಕಲಾಯಿತು. ಸ್ವತಂತ್ರ ಭಾರತದ 78 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಸುದೀರ್ಘ 57 ವರ್ಷ ಈ ದೇಶವನ್ನು ಆಳಿದ ಕಾಂಗ್ರೆಸ್, ಇಂತಹ ಹಲವಾರು ಚುನಾವಣಾ ಅಕ್ರಮ ಆರೋಪಗಳನ್ನು ಎದುರಿಸುತ್ತಿದೆ. ಇಷ್ಟಿದ್ದರೂ ರಾಹುಲ್ ಮಾತ್ರ ಬೇರೆಯವರ ಕಡೆಗೇ ಬೆರಳು ತೋರಿಸುತ್ತಿದ್ದಾರೆ.
ಕಾರಣ ಇಷ್ಟೇ, ಬಿಹಾರದಲ್ಲಿ ಕಾಂಗ್ರೆಸ್ ಸೋಲು ಖಚಿತವಾಗಿದೆ. ಹೀಗಾಗಿ ಚುನಾವಣೆಗೂ ಮುಂಚೆಯೇ ‘ತಮ್ಮ ಸೋಲಿಗೆ ಬೇರೆಯವರನ್ನು ಹೊಣೆ ಮಾಡುವ ‘ಮುಂಗಡ ಪ್ರಯತ್ನ’ ರಾಹುಲ್ ಆರಂಭಿಸಿದಂತಿದೆ ಎಂದು ರಾಮು ನಾಯ್ಕ ವ್ಯಂಗ್ಯವಾಡಿದ್ದಾರೆ.







