ಬಿಜೆಪಿಯ ಸೇವಾ ಪಾಕ್ಷಿಕ ಅಭಿಯಾನದ ಕಾರ್ಯಾಗಾರವು ಯಲ್ಲಾಪುರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆಯಿತು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್ 17 ರಿಂದ ಆರಂಭವಾಗುವ ಸೇವಾ ಪಾಕ್ಷಿಕ ಅಭಿಯಾನವು ಅಕ್ಟೋಬರ್ 02 ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜಯಂತಿವರೆಗೆ ನಡೆಯಲಿದೆ ಎಂದರು.
ಮೋದಿಯವರಂತೆಯೇ ನಾವೆಲ್ಲರೂ ಬೃಹತ್ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ಅಭಿಯಾನದ ಯಶಸ್ಸಿಗೆ ಶ್ರಮಿಸಬೇಕು. ಸ್ವದೇಶಿ ವಸ್ತು ಬಳಕೆಯ ಸಂಕಲ್ಪದೊಂದಿಗೆ, ‘ಆತ್ಮನಿರ್ಭರ ಭಾರತ ಅಭಿಯಾನ’ವನ್ನು ಮುಂದಿನ ಮೂರು ತಿಂಗಳು ಹಮ್ಮಿಕೊಳ್ಳೋಣ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯಲ್ಲಾಪುರ ಮಂಡಲದ ಅಧ್ಯಕ್ಷ ಪ್ರಸಾದ ಹೆಗಡೆ, ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಮಂಡಲ, ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ ಮತ್ತು ಬೂತ್ ಹಂತದಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಕೊಳ್ಳಲು ಕರೆ ನೀಡಿದರು. ಯಲ್ಲಾಪುರದಲ್ಲಿ ಬಿಜೆಪಿ ಸಂಘಟನೆ ಸದೃಢವಾಗಿದೆ, ಅಭಿಯಾನದ ಅಂಗವಾಗಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಸ್ವಚ್ಚತಾ ಅಭಿಯಾನ ಹಾಗೂ ವಿಚಾರ ಗೋಷ್ಠಿಯನ್ನು ಆಯೋಜಿಸಲಾಗುವುದು ಎಂದು ಹೇಳಿ, ಸೇವಾ ಪಾಕ್ಷಿಕ ಹಾಗೂ ಆತ್ಮನಿರ್ಭರ ಭಾರತ ಅಭಿಯಾನದ ತಂಡವನ್ನು ಘೋಷಣೆ ಮಾಡಿದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಚಂದ್ರಕಲಾ ಭಟ್ಟ ಪ್ರಸ್ತಾವಿಕವಾಗಿ ಮಾತನಾಡಿದರು.
ಕಿರವತ್ತಿ ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ದೊಂಡು ಪಾಟೀಲರವರು ಡೊಮಗೇರಿಯಲ್ಲಿ ಮರ ಬಿದ್ದು ಮೃತಪಟ್ಟವರಿಗೆ ಮಂಡಲ ವತಿಯಿಂದ ಸಂತಾಪ ಸೂಚಿಸಿದರು. ಪ್ರಮುಖರಾದ ಉಮೇಶ ಭಾಗ್ವತ್, ಜಿಪಂ ಮಾಜಿ ಸದಸ್ಯರಾದ ರಾಘವೇಂದ್ರ ಭಟ್ಟ ಹಾಸಣಗಿ, ಶೃತಿ ಹೆಗಡೆ ಮತ್ತು ರೂಪಾ ಬೂರ್ಮನೆ ಉಪಸ್ಥಿತರಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿಗಳಲಾದ ರವಿ ಕೈಟ್ಕರ್ ಸ್ವಾಗತಿಸಿ, ನಿರ್ವಹಿಸಿದರು, ನಟರಾಜ ಗೌಡರ್ ವಂದಿಸಿದರು.







