ಯಲ್ಲಾಪುರ ಹಾಗೂ ಅಂಕೋಲಾ ತಾಲೂಕುಗಳನ್ನು ಬೆಸೆಯುವ, ಗುಳ್ಳಾಪುರದಿಂದ ಹೆಗ್ಗಾರ ಭಾಗಕ್ಕೆ ಸಂಪರ್ಕ ಕಲ್ಪಿಸುವ ನೂತನ ಸೇತುವೆ ನಿರ್ಮಾಣಕ್ಕೆ 35 ಕೋಟಿ ರೂ ಅನುದಾನ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಈಗ ಮಂಜೂರಿ ಮಾಡಿಸಿದವರು ಯಾರು ಎಂಬ ವಿಷಯದಲ್ಲಿ ಕ್ರೆಡಿಟ್ ವಾರ್ ಜೋರಾಗಿದೆ. ನಿನ್ನೆ ಸಂಜೆ ಸೇತುವೆ ಪುನರ್ ನಿರ್ಮಾಣ ಸಮಿತಿಯ ವಿಶ್ವೇಶ್ವರ ಭಟ್ಟ, ಜಿ.ಆರ್.ಭಟ್ಟ ಅವರು ಸೇತುವೆ ಮಂಜೂರಿ ಮಾಡಿಸಿದವರು ಶಾಸಕ ಶಿವರಾಮ ಹೆಬ್ಬಾರ್ ಅವರು ಎಂದು ಹೇಳಿ ಅಭಿನಂದನೆ ಸಲ್ಲಿಸಿದರು. ಹೆಬ್ಬಾರ ಅವರ ಉಪಸ್ಥಿತಿಯಲ್ಲೇ ಗುಳ್ಳಾಪುರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದರು.
ಆದರೆ ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯವರು ಸೇತುವೆ ಮಂಜೂರಿಗೆ ಪ್ರಯತ್ನಿಸಿದವರು ಶಾಸಕ ಆರ್.ವಿ.ದೇಶಪಾಂಡೆಯವರು ಎಂದು ಹೇಳಿ, ದೇಶಪಾಂಡೆಯವರನ್ನು ಸನ್ಮಾನಿಸಿ, ಅಭಿನಂದಿಸಿದ್ದಾರೆ.
ಸೇತುವೆ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ವಿಶ್ವೇಶ್ವರ ಭಟ್ಟ, ವರ್ತಕ ಜಿ.ಆರ್.ಭಟ್ಟ ಇತರರು ಹೆಬ್ಬಾರ ಅವರ ಪ್ರಯತ್ನವನ್ನು ಕೊಂಡಾಡಿದ್ದರು. ಹೆಬ್ಬಾರ ಉಪಸ್ಥಿತಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದರು.
ಶುಕ್ರವಾರ ಹಕ್ಕೊತ್ತಾಯ ಸಮಿತಿಯ ಪ್ರಮುಖರಾದ ಹೆಗ್ಗಾರ ಪುನರ್ವಸತಿ ಪ್ರದೇಶದ ಅಶೋಕ ಗಾಂವ್ಕಾರ್, ಜಿ ವಿ ಭಟ್ಟ, ಪ್ರಭಾಕರ ಕಲಗಾರೆ, ವಿ.ಎನ್ ಭಟ್ಟ, ಜಯಪ್ರಕಾಶ ಗಾಂವ್ಕಾರ್ ಇತರರು ಹಳಿಯಾಳಕ್ಕೆ ಹೋಗಿ, ದೇಶಪಾಂಡೆ ಅವರನ್ನು ಅಭಿನಂದಿಸಿದ್ದಾರೆ. ಅನುದಾನ ಮಂಜೂರಿ ಮಾಡಿಸಿಕೊಡುವಲ್ಲಿ ಬಹುಮುಖ್ಯ ಪಾತ್ರವನ್ನು ದೇಶಪಾಂಡೆ ವಹಿಸಿದ್ದಾರೆಂದು ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯವರು ಹೇಳಿದ್ದಾರೆ.
ಯಾರು ಮಂಜೂರಿ ಮಾಡಿಸಿದರೂ ಕಟ್ಟುವುದು ಸೇತುವೆಯನ್ನೇ, ಅನುದಾನ ನೀಡುವುದು ಸರ್ಕಾರವೇ. ಉಪಯೋಗವಾಗುವುದು ಜನರಿಗೆ. ಹೀಗಿರುವಾಗ ಈ ಕಿತ್ತಾಟ ಏಕೆ ಎಂಬ ಪ್ರಶ್ನೆ ಜನಸಾಮಾನ್ಯರದ್ದು.







