ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯಿತಿಯ ಉದ್ಯೋಗ ಖಾತರಿ ಯೋಜನೆಯಡಿ ಭ್ರಷ್ಟಾಚಾರ ನಡೆದಿರುವುದು ಯೋಜನೆಯ ಒಂಬುಡ್ಸಮನ್ ತನಿಖೆಯಲ್ಲಿ ಖಚಿತವಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕರಿಗೆ ಒಂಬುಡ್ಸಮನ್ ಶಿಫಾರಸು ಮಾಡಿದ್ದಾರೆ.
2021-22 ರಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ದೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ನೆಲ ಸಮತಟ್ಟು ಮಾಡುವ ಕಾಮಗಾರಿಯನ್ನು ಮಾಡದೇ ಬಿಲ್ ಮಾಡಲಾಗಿದೆ. ಈ ಬಗ್ಗೆ ಪಂಚಾಯತದಲ್ಲಿ ಕೇಳಿದಾಗ ಯಾವುದೇ ಕಾಮಗಾರಿ ನಡೆದಿಲ್ಲವೇಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯರಾದ ನಾಗರಾಜ ಭಟ್ಟ ಚಾಪೆತೋಟ ಅವರು ಉದ್ಯೋಗ ಖಾತರಿ ಯೋಜನೆಯ ಜಿಲ್ಲಾ ಒಂಬುಡ್ಸಮನ್ ಕಾರ್ಯಾಲಯಕ್ಕೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದ ಒಂಬುಡ್ಸಮನ್ ಸಿ.ಟಿ.ನಾಯ್ಕ ಅವರು ಭ್ರಷ್ಟಾಚಾರ ನಡೆದಿರುವುದನ್ನು ಖಚಿತಪಡಿಸಿದ್ದಾರೆ.
ಆ ಅವಧಿಯಲ್ಲಿ ದೇಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ, ಹಾಲಿ ಕಲಬುರ್ಗಿಯ ಜೇವರ್ಗಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿರುವ ರುದ್ರಯ್ಯ ಹಿರೇಮಠ, ದೇಹಳ್ಳಿ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್ ಪ್ರಮೋದ ನಾಯ್ಕ ಹಾಗೂ ಹಿಂದಿನ ಅಭಿವೃದ್ಧಿ ಅಧಿಕಾರಿ, ಹಾಲಿ ಉಮ್ಮಚಗಿ ಅಭಿವೃದ್ಧಿ ಅಧಿಕಾರಿಯಾಗಿರುವ ನಸ್ರೀನ್ ಫಕ್ರುದ್ದೀನ್ ಯಕ್ಕುಂಡಿ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
ಈ ಮೂವರಿಗೂ ತಲಾ 1 ಸಾವಿರ ರೂ ಡಂಡ ವಿಧಿಸಿ, ಎಚ್ಚರಿಕೆ ನೀಡುವಂತೆ ಒಂಬುಡ್ಸಮನ್ ಸಿ.ಟಿ.ನಾಯ್ಕ ಜಿ.ಪಂ ಸಿಇಒ ಅವರಿಗೆ ಶಿಫಾರಸು ಮಾಡಿದ್ದಾರೆ. ಅದರಂತೆ ಜಿ.ಪಂ ಸಿಇಒ ಅವರು ಕ್ರಮ ಕೈಗೊಳ್ಳಲಿದ್ದಾರೆ.







