ಯಲ್ಲಾಪುರ ತಾಲೂಕಿನ ಬಹುತೇಕ ಗ್ರಾಮೀಣ ರಸ್ತೆಗಳ ದುರವಸ್ಥೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಹೊಂಡಗಳ ನಡುವೆ ರಸ್ತೆಯನ್ನು ಹುಡುಕಬೇಕಾದ ಸ್ಥಿತಿಯಿದೆ. ಸರ್ಕಾರದಿಂದ ರಸ್ತೆಯ ದುರಸ್ತಿಗೆ ಬಿಡಿಗಾಸೂ ಬರುವುದಿಲ್ಲವೆಂಬ ಭರವಸೆ ಇರುವ ಕಾರಣಕ್ಕಾಗಿ, ಜನರೇ ರಸ್ತೆ ಸರಿಪಡಿಸಿಕೊಳ್ಳಲು ತಮ್ಮದೇ ಆದ ವ್ಯವಸ್ಥೆಗೆ ಮೊರೆ ಹೋಗುತ್ತಿದ್ದಾರೆ.
ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಣತಗೇರಿ ಶಾಲೆಯಿಂದ ನಾಳಶೇರವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ವಾಹನಗಳ ಓಡಾಟ ಕಷ್ಟಕರವಾಗಿತ್ತು. ಕೆಲವು ದಿವಸಗಳಿಂದ ಬಸ್ ಓಡಾಟವೂ ಸ್ಥಗಿತಗೊಂಡಿತ್ತು. ನಿತ್ಯವೂ ಬಸ್ ನ್ನೇ ನಂಬಿ ಓಡಾಡುವವರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿತ್ತು.
ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯ ದುರಸ್ತಿಯ ಬಗ್ಗೆ ಇಲಾಖೆಯೇನೂ ಮುಂದಾಗುವ ಲಕ್ಷಣಗಳು ಕಂಡು ಬರಲಿಲ್ಲ. ಹಾಗಾಗಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ತಮ್ಮ ಸಮಸ್ಯೆ ತೋಡಿಕೊಂಡರು.
ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಆರ್.ಹೆಗಡೆ ಹಾಗೂ ನರಸಿಂಹ ಕೋಣೆಮನೆ ಸ್ಪಂದಿಸಿ ಕಡಿ (ಕಲ್ಲು) ನೀಡಿದ್ದಾರೆ. ಅದನ್ನು ಸಾಗಿಸಲು ಮಹೇಶ ಹೆಗಡೆ ಕಣ್ಣಿಜಡ್ಡಿ ಟ್ರ್ಯಾಕ್ಟರ್ ನೀಡಿದ್ದಾರೆ. ಗ್ರಾಮಸ್ಥರೆಲ್ಲಾ ಸೇರಿ ಶ್ರಮದಾನದ ಮೂಲಕ ರಸ್ತೆಯ ಹೊಂಡಗಳನ್ನು ಮುಚ್ಚಿದ್ದಾರೆ.
ರಸ್ತೆಯ ಹೊಂಡದ ಸಮಸ್ಯೆ ತಾತ್ಕಾಲಿಕವಾಗಿ ದೂರವಾಗಿದೆ. ಸರ್ಕಾರವನ್ನೇ ನಂಬಿಕೊಂಡು ಕುಳಿತಿದ್ದರೆ ರಸ್ತೆಯ ಅವ್ಯವಸ್ಥೆ ದೂರವಾಗುತ್ತಿರಲಿಲ್ಲ ಎಂಬುದು ಗ್ರಾಮಸ್ಥರ ಮಾತು.







