ಯಲ್ಲಾಪುರದಲ್ಲಿ ಅನಧಿಕೃತ ಮೀನು ಮಾರಾಟದ ಕುರಿತಂತೆ ಪಟ್ಟಣ ಪಂಚಾಯಿತಿಯಿಂದ ದಿನಕ್ಕೊಂದು ಪ್ರಹಸನ ಮುಂದುವರಿದಿದೆ.
ಪಟ್ಟಣದ ವಿವಿಧೆಡೆ ರಸ್ತೆ ಬದಿಗಳಲ್ಲಿ ಮೀನು ಮಾರಾಟ ಮಾಡುತ್ತಿದ್ದವರನ್ನು ಪೌರ ಕಾರ್ಮಿಕರ ಮೂಲಕ ಎತ್ತಂಗಡಿ ಮಾಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜೋಡುಕೆರೆ ಬಳಿ, ತಟಗಾರ ಕ್ರಾಸ್ ಬಳಿ ಸೇರಿದಂತೆ ಹಲವೆಡೆ ಪೌರಕಾರ್ಮಿಕರು ಹೋಗಿ ಅಂಗಡಿಕಾರರನ್ನು ಅಲ್ಲಿಂದ ಓಡಿಸಿದ್ದಾರೆ.
ಜೋಡುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಇದ್ದವರನ್ನು ಅಲ್ಲಿಂದ ತೆರಳುವಂತೆ ಪೌರಕಾರ್ಮಿಕರು ಸೂಚಿಸುತ್ತಿರುವ ಸಂದರ್ಭದಲ್ಲೇ ಮಾರಾಟಗಾರರ ನಡುವೆ ಜೋರಾದ ಕಿತ್ತಾಟವೇ ನಡೆಯಿತು. ವ್ಯಾಪಾರಕ್ಕೆ ಕುಳಿತುಕೊಳ್ಳುವ ಸ್ಥಳದ ವಿಷಯವಾಗಿ ನಡೆದ ಈ ಕಿತ್ತಾಟಕ್ಕೆ ಪೌರಕಾರ್ಮಿಕರು ಮೂಕ ಪ್ರೇಕ್ಷಕರಾದರು.
ಬೆಳಿಗ್ಗೆ ಬೇಗ ಬಂದು ವ್ಯಾಪಾರಕ್ಕೆ ಜಾಗ ಹಿಡಿಯುವ ವಿಷಯದಲ್ಲಿ ಮೀನು ವ್ಯಾಪಾರ ಮಾಡುವ ಮಹಿಳೆ ಹಾಗೂ ಪುರುಷನ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೂ ವಾಗ್ವಾದ ತಲುಪಿತ್ತು. ಕೊನೆಗೆ ಪೌರಕಾರ್ಮಿಕರು ನಾಳೆಯಿಂದ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ಇಲ್ಲ. ಬೇಕಿದ್ದರೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಬಹುದು ಎಂದು ಹೇಳಿ ಅವರನ್ನು ಕಳುಹಿಸಿದರು.
ಪಟ್ಟಣ ಪಂಚಾಯಿತಿಯ ಈ ಕ್ರಮವೂ ವಿಚಿತ್ರವಾಗಿದ್ದು, ಹಲವು ಅನುಮಾನಗಳನ್ನು ತರಿಸುವಂತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕ ಸಬಗೇರಿಯಲ್ಲಿ ಶೆಡ್ ನ ಅಂಗಡಿ ನಿರ್ಮಿಸಿಕೊಂಡು ಅನಧಿಕೃತವಾಗಿ ಮೀನು ಮಾರುತ್ತಿದ್ದವರ ವಿರುದ್ಧ ಎಚ್ಚರಿಕೆ ನೀಡಿದ್ದು ಬಿಟ್ಟರೆ ಯಾವ ಕ್ರಮವನ್ನೂ ಈವರೆಗೆ ಕೈಗೊಂಡಿಲ್ಲ. ಆದರೆ ರಸ್ತೆ ಬದಿಯ ಮಾರಾಟಗಾರರನ್ನು ಮಾತ್ರ ಎತ್ತಂಗಡಿ ಮಾಡುವ ಈ ಪ್ರಹಸನದ ಹಿನ್ನೆಲೆ ಏನು ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಒಂದೆಡೆ ಕುಳಿತು ವ್ಯಾಪಾರ ಮಾಡುವಂತಿಲ್ಲ, ವಾಹನಗಳಲ್ಲಿ ಮೀನು-ಮಾಂಸ ಇರಿಸಿಕೊಂಡು ವ್ಯಾಪಾರ ಮಾಡಬಹುದೆಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಶೆಡ್ ನ ಅಂಗಡಿಗಳು ಇದ್ದಲ್ಲೇ ಇರುತ್ತವೆಯೇ ಅಥವಾ ಸಂಚರಿಸುತ್ತವೆಯೇ ಎಂದು ವ್ಯಾಪಾರಸ್ಥರು ಕೇಳುತ್ತಿದ್ದಾರೆ.
ಶೆಡ್ ನ ಅಂಗಡಿ ನಿರ್ಮಿಸಿ ಮೀನು-ಮಾಂಸ ಮಾರಾಟ ಮಾಡಲು ಪಟ್ಟಣ ಪಂಚಾಯಿತಿಯಿಂದ ಯಾವುದೇ ಅಭ್ಯಂತರವಿಲ್ಲವೆಂದಾದರೆ, ನಾವೂ ಅಂತಹ ಅಂಗಡಿಯನ್ನೇ ಮಾಡಿಕೊಳ್ಳುತ್ತೇವೆ. ರಸ್ತೆ ಬದಿಯ ವ್ಯಾಪಾರ ನಿಲ್ಲಿಸುತ್ತೇವೆ ಎಂಬ ಮಾತು ವ್ಯಾಪಾರಸ್ಥರದು.
ADVERTISEMENT







