ಬೂಕರ್ ಪ್ರಶಸ್ತಿಯಲ್ಲಿ ಬಾನು ಮುಸ್ತಾಕರಷ್ಟೇ ಪಾಲು ದೀಪಾ ಬಸ್ತಿಯವರದ್ದೂ ಇದೆ. ನಮ್ಮ ಜಾತ್ಯಾತೀತ ಮುಖ್ಯಮಂತ್ರಿಗಳು ದಸರಾ ಉದ್ಘಾಟನೆಗೆ ಬಾನು ಮುಸ್ತಾಕರಿಗೆ ಮಾತ್ರ ಗೌರವ ಆಹ್ವಾನ ನೀಡಿ, ದೀಪಾ ಬಸ್ತಿಯವರನ್ನು ಕೈ ಬಿಟ್ಟಿದ್ದೇಕೆ? ಅವರು ಹಿಂದು ಧರ್ಮದವರೆಂದು ಬಿಟ್ಟಿದ್ದಾರೆಯೇ ಎಂದು ಬಿಜೆಪಿ ಹಿರಿಯ ಮುಖಂಡ ರಾಮು ನಾಯ್ಕ ಪ್ರಶ್ನಿಸಿದ್ದಾರೆ.
ಪ್ರತಿಷ್ಠಿತ ‘ಬೂಕರ್’ ಪ್ರಶಸ್ತಿ ವಿಜೇತ, ಕನ್ನಡದ ಹಿರಿಯ ಸಾಹಿತಿ ಬಾನು ಮುಸ್ತಾಕರವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿರುವ ಕಾರಣ, ದಸರಾ ಉದ್ಘಾಟನೆಗೆ ಅವರನ್ನು ಅತ್ಯಂತ ಗೌರವಯುತವಾಗಿ ಆಹ್ವಾನಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಬಾನು ಮುಸ್ತಾಕರವರ ಕನ್ನಡ ಸಾಧನೆಯ ಬಗ್ಗೆ ನಮಗೂ ಹೆಮ್ಮೆಯಿದೆ. ಆದರೆ, ಕನ್ನಡ ಸಾಹಿತ್ಯಕ್ಕೆ ಮೊಟ್ಟ ಮೊದಲ ಬಾರಿ ದೊರಕಿದ ಈ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಮ್ಮಾನಕ್ಕೆ ಕೇವಲ ಬಾನು ಮುಸ್ತಾಕ್ ಮಾತ್ರ ಅರ್ಹರೇ? ಎಂದು ಪ್ರಶ್ನಿಸಿದ್ದಾರೆ.
ಬಾನು ಮುಸ್ತಾಕರವರು ಕನ್ನಡದಲ್ಲಿ ಬರೆದು 2004 ರಿಂದ ಕರ್ನಾಟಕದಲ್ಲಿಯೇ ಸುತ್ತುತ್ತಿದ್ದ ಈ “ಎದೆಯ ಹಣತೆ” ಎಂಬ ಉತ್ಕೃಷ್ಟ ಕಥಾ ಸಂಕಲನವನ್ನು 20 ವರ್ಷಗಳ ನಂತರ, ಮೂಲ ಭಾಷೆಯ ಭಾವನೆಗಳಿಗೆ ಧಕ್ಕೆಯಾಗದಂತೆ ಅಚ್ಚುಕಟ್ಟಾಗಿ ಇಂಗ್ಲೀಷ್ ಭಾಷೆಗೆ ಅನುವಾದಿಸಿ, “ಹಾರ್ಟ ಲ್ಯಾಂಪ್” ಎನ್ನುವ ಹೆಸರಿನಲ್ಲಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪರಿಚಯಿಸಿ, ಅತ್ಯುನ್ನತ ಬೂಕರ್ ಪ್ರಶಸ್ತಿ ದೊರಕುವಂತೆ ಮಾಡಿದ, ಕನ್ನಡದ ಮತ್ತೋರ್ವ ಲೇಖಕಿ, ಮಡಕೇರಿಯ ದೀಪಾ ಬಸ್ತಿ. ಅವರೂ ಈ ಗೌರವದಲ್ಲಿ ಸಮಾನ ಪಾಲುದಾರರಲ್ಲವೇ?
ಬಾನು ಮುಸ್ತಾಕರವರಿಗೆ ಈ ವರ್ಷ ಲಂಡನ್ನಲ್ಲಿ ಬೂಕರ್ ಪ್ರಶಸ್ತಿ ನೀಡುವಾಗ, ಅವರೊಟ್ಟಿಗೆ ದೀಪಾ ಬಸ್ತಿಯವರನ್ನೂ ಸನ್ಮಾನಿಸಲಾಗಿತ್ತು. ಪ್ರಶಸ್ತಿ ಮೊತ್ತವನ್ನು ಇಬ್ಬರೂ ಸಾಧಕಿಯರಿಗೆ ಸರಿಸಮನಾಗಿ ಹಂಚಲಾಗಿತ್ತು. ಆದರೆ, ನಮ್ಮ ಮುಖ್ಯಮಂತ್ರಿಗಳು ಕೇವಲ ಬಾನುಮುಸ್ತಾಕರಿಗೆ ಗೌರವ ಆಹ್ವಾನ ನೀಡಿ, ದೀಪಾ ಅವರನ್ನು ಬಿಟ್ಟಿರುವುದಕ್ಕೆ ಅವರು ಹಿಂದು ಎಂಬುದೇ ಕಾರಣವಿರಬಹುದು ಎಂದು ರಾಮು ನಾಯ್ಕ ಹೇಳಿದ್ದಾರೆ.







