ರಾಜ್ಯ ಸರ್ಕಾರ ನಡೆಸುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಕ ಸಮೀಕ್ಷೆಯಲ್ಲಿ ಧನಗರ ಗೌಳಿ ಸಮುದಾಯದವರು ಏಕರೂಪದಲ್ಲಿ ನಮೂದಿಸಬೇಕು. ಸಮುದಾಯದ ಯಾರೊಬ್ಬರೂ ಸಮೀಕ್ಷೆಯಲ್ಲಿ ತಪ್ಪದಂತೆ ನೋಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜ್ಯ ಧನಗರ ಗೌಳಿ ಸಮುದಾಯ ಸಮಿತಿಯ ಕಾರ್ಯಾಧ್ಯಕ್ಷ ದೋಂಡು ಪಾಟೀಲ ಹೇಳಿದರು.
ಅವರು ಯಲ್ಲಾಪುರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮೀಕ್ಷೆಗೆ ಸಂಬಂಧಿಸಿದಂತೆ ಸಮಾಜದ ಮುಂದಿನ ನಡೆ ಹೇಗಿರಬೇಕೆಂಬುವುದರ ಕುರಿತು ರಾಜ್ಯ ಸಮಿತಿಯ ಪದಾಧಿಕಾರಿಗಳ, ಸಮಾಜದ ನೇತೃತ್ವದಲ್ಲಿ ಮುಂಡಗೋಡ ಹಾಗೂ ಕಿರವತ್ತಿಯಲ್ಲಿ ಸಭೆ ನಡೆಸಿದ್ದೇವೆ.
ಸಮಾಜವು ಗೌಳಿ, ಧನಗರ, ಕಾಡುಗೊಲ್ಲ, ಕಾಡು ಕುರುಬ ಮುಂತಾದ ಅನೇಕ ಉಪಜಾತಿಗಳಲ್ಲಿ ಹರಡಿಹೊಗಿದೆ. ಹೈನುಗಾರಿಕೆಯೇ ಕುಲಕಸುಬನ್ನಾಗಿ ಬದುಕುತ್ತಿರುವ ಪಶುಪಾಲಕರಾದ ನಮ್ಮ ಸಮಾಜವನ್ನು ಪ್ರತ್ಯೇಕವಾಗಿ ಗುರುತಿಸುವ ಸಲುವಾಗಿ ಅನೇಕ ವರ್ಷಗಳಿಂದ ಧನಗರ ಗೌಳಿ” ಎಂಬ ಪ್ರತ್ಯೇಕ ಜಾತಿಯಡಿಯಲ್ಲಿ ಕರ್ನಾಟಕದಲ್ಲಿ ನಮ್ಮ ಸಮಾಜವನ್ನು ಗುರುತಿಸಿ, ಕುಲಶಾಸ್ತ್ರ ಅಧ್ಯಯನ ನಡೆಸಿ ನಮಗೆ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುವಂತೆ ಮಾಡುವುದು ನಮ್ಮ ಹೋರಾಟಗಳ ಮೂಲ ಉದ್ದೇಶವಾಗಿದೆ ಎಂದರು.
ಪ್ರತ್ಯೇಕ ಜಾತಿ ಸ್ಥಾನಮಾನದ ಹೋರಾಟಕ್ಕಾಗಿ ಸಾಮಾಜಿಕ ಮತ್ತು ಶೈಕ್ಷಣಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದು, ಜಾತಿಯ ಕಾಲಂನಲ್ಲಿ ಧನಗರ ಗೌಳಿ, ಉಪಜಾತಿಯ ಕಾಲಂನಲ್ಲಿ ಗೌಳಿ, ಮಾತೃಭಾಷೆ ಮರಾಠಿ, ಕುಲಕಸುಬು ಪಶುಸಂಗೋಪನೆ ಎಂದು ನಮೂದಿಸಲು ತೀರ್ಮಾನಿಸಲಾಗಿದೆ. ಈ ನಿರ್ಣಯಗಳನ್ನು ಸಮೀಕ್ಷೆಗೂ ಮುನ್ನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಸಮಿತಿಯ ಪ್ರಮುಖರು ಶ್ರಮಿಸುತ್ತಿದ್ದಾರೆ ಎಂದರು.
ಸಮಿತಿಯ ಉಪಾಧ್ಯಕ್ಷ ಬಮ್ಮು ಎಡಗೆ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ಲಾಂಬೋರ, ಜಿಲ್ಲಾ ಉಪಾಧ್ಯಕ್ಷ ವಿಠ್ಠಲ ಶೆಳಕೆ, ತಾಲೂಕಾ ಅಧ್ಯಕ್ಷ ವಿಠ್ಠಲ ಪಾಂಡ್ರಮೀಸೆ, ವಿಠ್ಠಲ ತಾಟೆ, ಸೋನು ಜಂಗ್ಲೆ ಇದ್ದರು.







