ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ವೇದಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ನಿವೃತ್ತ ಪ್ರಾಂಶುಪಾಲ ಎಚ್.ಬಿ.ಪಂಚಾಕ್ಷರಯ್ಯ ಮಾತನಾಡಿ, ಸಂಸ್ಕಾರದಿಂದ ಮಾತ್ರ ನಮ್ಮ ವ್ಯಕ್ತಿತ್ವ, ಬದುಕು ಅರ್ಥಪೂರ್ಣವಾಗುತ್ತದೆ. ಕೇವಲ ದೇವರ ಕೃಪೆ, ಅದೃಷ್ಟ ಇದ್ದರೆ ಸಾಲದು. ಜತೆಗೆ, ನಮ್ಮ ಪರಿಶ್ರಮ, ಧೈರ್ಯ, ವಿಶ್ವಾಸ, ದೃಢತೆ ಇದ್ದರೆ ಮಾತ್ರ ಜೀವನದಲ್ಲಿ ಸಾಧಕರಾಗಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ ಮಾತನಾಡಿ, ಪ್ರತಿಷ್ಠಾನದ ವತಿಯಿಂದ ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಕುರಿತು ವಿವರಿಸಿದರು. ಬಡತನದ ಕಾರಣಕ್ಕಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ನಿಲ್ಲಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ನೆರೆ ಹಾವಳಿ, ಕರೊನಾ ಸಂದರ್ಭದಲ್ಲೂ ಹಲವರಿಗೆ ನೆರವಾಗುವ ಕಾರ್ಯವನ್ನು ಪ್ರತಿಷ್ಠಾನ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಆರ್.ಡಿ.ಜನಾರ್ದನ ಮಾತನಾಡಿ, ಕಾಲೇಜು 40 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ವಿಶಿಷ್ಟ ಕಾರ್ಯಕ್ರಮ ಅಯೋಜಿಸುವ ಯೋಜನೆಯಿದೆ. ಶೈಕ್ಷಣಿಕ ಚಟುವಟಿಕೆಗಳ ಜತೆಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನ್ವೇಷಿಸಿ, ವೇದಿಕೆ ಒದಗಿಸುವ ಕಾರ್ಯವನ್ನೂ ಮಾಡಲಾಗುತ್ತಿದೆ. ಗ್ರಾಮೀಣ ಭಾಗಗಳಿಗೆ ಹೋಗಿ, ಶಿಕ್ಷಣ ವಂಚಿತರನ್ನು ಕಾಲೇಜಿಗೆ ಸೇರಿಸುವ ಕಾರ್ಯದಲ್ಲೂ ತೊಡಗಿಕೊಂಡಿದ್ದೇವೆ ಎಂದರು.
ಎನ್.ಎಸ್.ಎಸ್ ನ ವಾರ್ಷಿಕ ಬುಲೆಟಿನ್ ಬಿಡುಗಡೆಗೊಳಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಲಾವಿದ ಶ್ರೀಪಾದ ಭಟ್ಟ ಗೀತೆಗಳ ಮೂಲಕ ರಂಜಿಸಿದರು. ಪ.ಪಂ ಸದಸ್ಯೆ ಸುನಂದಾ ದಾಸ್, ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಉಲ್ಲಾಸ ಶಾನಭಾಗ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರೇಮಾನಂದ ನಾಯ್ಕ, ಕ್ರಿಯೇಟಿವ್ ಕಂಪ್ಯೂಟರ್ ನ ಶ್ರೀನಿವಾಸ ಮುರ್ಡೇಶ್ವರ, ಉಪನ್ಯಾಸಕರಾದ ಸುರೇಖಾ ತಡವಲ, ನಾಗಶ್ರೀ ಜಡ್ಡಿಪಾಲ, ರವಿ ಶೇಷಗಿರಿ, ರವಿ ಭಟ್ಟ ಇತರರಿದ್ದರು.
ಪೃಥ್ವಿ ಭಾಗ್ವತ, ಶ್ರುತಿ ಭಟ್ಟ ಪ್ರಾರ್ಥಿಸಿದರು. ಸಖೀನಾ ಸ್ವಾಗತಿಸಿದರು. ನಂದಿತಾ ಭಾಗ್ವತ ನಿರ್ವಹಿಸಿದರು. ಉಪನ್ಯಾಸಕ ಡಾ.ಓಂಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈಶಾಲಿ ದೇವಳಿ ವಂದಿಸಿದರು.







