ಯಲ್ಲಾಪುರ ತಾಲೂಕಿನ ಮಾಗೋಡ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದಿಂದ ಪ್ರಸಂಗ ಪಂಚಕ-3 ಕಾರ್ಯಕ್ರಮ ಶನಿವಾರ ಯಶಸ್ವಿಯಾಗಿ ನಡೆಯಿತು. ಸಂಜೆ 6 ರಿಂದ ಮಾರನೇ ದಿನ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ 5 ತಾಳಮದ್ದಲೆಗಳು ಪ್ರಸ್ತುತಗೊಂಡವು.
ಹಿರಿಯ ವೈದಿಕರಾದ ನಾರಾಯಣ ಭಟ್ಟ ಮೊಟ್ಟೆಗದ್ದೆ, ರಾಮಕೃಷ್ಣ ಭಟ್ಟ ಮಾಗೋಡ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು.
ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ, ಭೀಷ್ಮ ಪ್ರತಿಜ್ಞೆ, ರತ್ನಾವತಿ ಕಲ್ಯಾಣ, ರಾಮಾಂಜನೇಯ, ದ್ರೌಪದಿ ಪ್ರತಾಪ, ಗದಾಯುದ್ಧ ಎಂಬ 5 ಪೌರಾಣಿಕ ಆಖ್ಯಾನಗಳು ಪ್ರಸ್ತುತಗೊಂಡವು.
ಪ್ರತಿ ಪ್ರಸಂಗಕ್ಕೂ 2 ತಾಸು 20 ನಿಮಿಷಗಳ ಕಾಲಾವಕಾಶ ನಿಗದಿಪಡಿಸಲಾಗಿತ್ತು. ನಿರ್ದಿಷ್ಟ ಸಮಯದಲ್ಲಿ ಹಿಮ್ಮೇಳ-ಮುಮ್ಮೇಳದ ಕಲಾವಿದರು ಅಚ್ಚುಕಟ್ಟಾಗಿ ಪ್ರಸಂಗ ಪ್ರಸ್ತುತಪಡಿಸಿದರು. 45 ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗುಂದದ ಶಾರ್ವರಿ ತಾಳಮದ್ದಲೆ ಕೂಟ ಹಾಗೂ ಜೂಜಿನಬೈಲಿನ ವಿಶ್ವವಂದ್ಯಂ ಮಹಿಳಾ ಕಲಾ ಬಳಗದ ಮಹಿಳಾ ಕಲಾವಿದರೂ ಭಾಗವಹಿಸಿದ್ದು ವಿಶೇಷವಾಗಿತ್ತು.
ಸಮಯ ಪಾಲನೆ, ಶಿಸ್ತು, ಆತ್ಮೀಯ ಆತಿಥ್ಯಕ್ಕೆ ಪ್ರಸಂಗ ಪಂಚಕ ಹೆಸರಾಗಿದ್ದು, ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾಸಕ್ತರು ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೀರಮಾರುತಿ ತಾಳಮದ್ದಲೆ ಕೂಟವು ಕಳೆದ ಮೂರು ವರ್ಷಗಳಿಂದ ಪ್ರಸಂಗ ಪಂಚಕ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ. ಪ್ರಸಂಗದ ಆಯ್ಕೆ, ಕಲಾವಿದರಿಗೆ ಪಾತ್ರ ಹಂಚಿಕೆಯನ್ನು ಅಚ್ಚುಕಟ್ಟಾಗಿ ಮಾಡುವುದು, ಹಿಮ್ಮೇಳ, ಮುಮ್ಮೇಳದ ಪ್ರತಿ ಕಲಾವಿದರು ಸಮಯ ಪಾಲನೆಯ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುವುದು. ಕಲಾವಿದರು ಯಾವುದೇ ಅಪೇಕ್ಷೆ ಇಲ್ಲದೇ, ಸೇವಾ ಮನೋಭಾವನೆಯಿಂದಲೇ ಈ ಕಲಾರಾಧನೆಯಲ್ಲಿ ಭಾಗವಹಿಸುವುದು. ಕಲಾವಿದರಿಗೆ ಮಾತ್ರವಲ್ಲದೇ ಬಂದ ಪ್ರೇಕ್ಷಕರಿಗೂ ನಿರಂತರ ಊಟ, ತಿಂಡಿ, ಪಾನೀಯದ ವ್ಯವಸ್ಥೆ.. ಹೀಗೆ ಹಲವು ಅನುಸರಣೀಯ ಸಂಗತಿಗಳ ಮೂಲಕ ಪ್ರಸಂಗ ಪಂಚಕ ಕಾರ್ಯಕ್ರಮ ಇನ್ನೊಂದು ಯಶಸ್ವೀ ಹೆಜ್ಜೆ ಇರಿಸಿತು. ಕೂಟದ ಸದಸ್ಯರ ಜತೆಗೆ ಗ್ರಾಮಸ್ಥರೂ ತಮ್ಮದೇ ಕಾರ್ಯಕ್ರಮವೆಂಬಂತೆ ನೀಡಿದ ಸಹಕಾರ, ಪ್ರೋತ್ಸಾಹವೂ ಮಾದರಿಯಾಗಿತ್ತು.







