ಖುರ್ಚಿ ಉಳಿಸಿಕೊಳ್ಳಲು ಗುದ್ದಾಡುತ್ತಿರುವ ಮುಖ್ಯಮಂತ್ರಿಗಳು ತಮ್ಮ ವಿರುದ್ಧ ತಿರುಗಿ ಬಿದ್ದ ತಮ್ಮದೇ ಪಕ್ಷದವರ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಮುಂದಾಗಿರುವುದು ವಿಚಿತ್ರವಾಗಿದೆ ಎಂದು ಹಿರಿಯ ಬಿಜೆಪಿ ಮುಖಂಡ ರಾಮು ನಾಯ್ಕ ವ್ಯಂಗ್ಯವಾಡಿದ್ದಾರೆ.
ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರ ‘ಮಾದೇವಪುರ ಓಟ್ ಚೋರಿ’ ಆರೋಪ ಠುಸ್ ಆಯಿತು. ಈಗ ಬಿ.ಆರ್.ಪಾಟೀಲರ ಅಳಂದಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ಎನ್ನುತ್ತಿದ್ದಾರೆ. ಅಳಂದಾ ಕ್ಷೇತ್ರದ ಚುನಾವಣೆ ಮುಗಿದು ಎರಡು ವರ್ಷವೇ ಕಳೆದಿದೆ. ಸ್ವತಃ ಕಾಂಗ್ರೆಸ್ಸಿನ ಬಿ.ಆರ್.ಪಾಟೀಲರೇ ಅಲ್ಲಿ ಗೆದ್ದಿದ್ದಾರೆ. ಯಾರಿಂದಲೂ ಚುನಾವಣಾ ಅಕ್ರಮ ನಡೆದ ದೂರು ಬಂದಿಲ್ಲ. ಈಗ ದಿಢೀರ್ ಈ ಪ್ರಕರಣ ಎತ್ತುಗಡೆ ಆಗಿದ್ದೇಗೆ? ಎಂದು ಪ್ರಶ್ನಿಸಿದ್ದಾರೆ.
ಎರಡು ತಿಂಗಳ ಹಿಂದೆ, ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ಬಿ.ಆರ್.ಪಾಟೀಲರು “ನಾನು ಬಾಯಿ ಬಿಟ್ರೆ ಸರಕಾರವೇ ಅಲ್ಲಾಡುತ್ತದೆ” ಎಂದು ಸಾರ್ವಜನಿಕವಾಗಿ ಗುಡುಗಿದ ತಕ್ಷಣ ‘ಅಳಂದಾ ಚುನಾವಣೆ ಅಕ್ರಮ’ ಎನ್ನುವ ಹೊಸ ಪ್ರಕರಣ ಸೃಷ್ಟಿಯಾಗಿದೆ. ರಾಹುಲ್ ಬಾಯಿಂದ ಆರೋಪ ಮಾಡಿಸಿದ್ದಾರೆ. ಖುರ್ಚಿ ಉಳಿಸಿಕೊಳ್ಳಲು ಗುದ್ದಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ತಾರು ಕೋಟಿ ರೂ. ವೆಚ್ಚದ ಎಸ್.ಐ.ಟಿ. ತನಿಖೆಗೂ ಆದೇಶಿಸಿದ್ದಾರೆ.
ಇದೊಂದು ಪಿತೂರಿ, ತಮ್ಮ ವಿರುದ್ದ ತಿರುಗಿ ಬಿದ್ದಿರುವ ತಮ್ಮದೇ ಪಕ್ಷದ ಬಿ.ಆರ್.ಪಾಟೀಲರ ಬಾಯಿ ಮುಚ್ಚಿಸುವ ಏಕೈಕ ಉದ್ದೇಶದಿಂದ ಚುನಾವಣಾ ಆಯೋಗದ ಮೇಲೆ ಆರೋಪ ಮಾಡಲಾಗುತ್ತಿದೆ.ಪ್ರಸಕ್ತ ಸರಕಾರದ ಅವಧಿ ಮುಗಿಯುವವರೆಗೆ ಈ ಟೈಂಪಾಸ್ ನಾಟಕವೂ ಯಥಾಪ್ರಕಾರ ಮುಂದುವರೆಯಲಿದೆ ಎಂದು ಟೀಕಿಸಿದ್ದಾರೆ.
ಯಾರ್ಯಾರದೋ ರಾಜಕೀಯ ತೀಟೆಗಾಗಿ ಕರ್ನಾಟಕದ ಬೊಕ್ಕಸ ಬರಿದಾಗುತ್ತಿದೆ. ನಾವು ಮೂಕ ಪ್ರೇಕ್ಷಕರಾಗುತ್ತಿದ್ದೇವೆ. ಈಗಾಗಲೇ ಎಸ್.ಐ.ಟಿ. ರಚನೆಯಾಗಿರುವ ಧರ್ಮಸ್ಥಳದ ಪ್ರಕರಣ ಹಳ್ಳ ಹಿಡಿಯುತ್ತಿದೆ. ಚಿನ್ನಸ್ವಾಮಿ ಮೈದಾನದ ಐ.ಪಿ.ಎಲ್. ದುರಂತ, ವಾಲ್ಮೀಕಿ ಹಗರಣ, ಮೂಡಾ ಹಗರಣ ಎಲ್ಲವೂ ತಣ್ಣಗಾಗುತ್ತಿವೆ. 2020 ರ ಕೆಜೆಹಳ್ಳಿ, ಡಿಜೆಹಳ್ಳಿ ಗಲಭೆ, 2022 ರ ಹುಬ್ಬಳ್ಳಿ ಗಲಭೆ, 2023 ರ ಶಿವಮೊಗ್ಗ ಗಲಭೆ, ಹಾಡಹಗಲೇ ಮಚ್ಚು, ಲಾಂಗು ಝಳಪಿಸಿದ ಪ್ರಕರಣ, ವಿಧಾನಸೌಧದದಲ್ಲಿ ಪಾಕಿಸ್ತಾನ ಜಿಂದಾಬಾದ ಕೂಗಿದ ಪ್ರಕರಣ ಇವು ಅಲ್ಲಲ್ಲೇ ಮುಚ್ಚಿಹೋಗುತ್ತಿವೆ. ದಾವಣಗೆರೆ ದಾಂಧಲೆ, ಮದ್ದೂರು ಗಣೇಶ ಮೆರವಣಿಗೆಯಲ್ಲಿ ಕಲ್ಲುತೂರಾಟ, ಭದ್ರಾವತಿ ಈದ್ ಮೆರವಣಿಗೆಯಲ್ಲಿ ಪಾಕ್ ಧ್ವಜಗಳ ಹಾರಾಟ ಇವೆಲ್ಲವೂ ನಮ್ಮ ರಾಜ್ಯ ಸರಕಾರಕ್ಕೆ ಸಾಮಾನ್ಯ ಸಂಗತಿಯಂತೆ ಕಾಣುತ್ತಿವೆ.
ಇಂತಹ ಹತ್ತಾರು ಹಗರಣಗಳು ತಮ್ಮ ಕಾಲಬುಡದಲ್ಲಿ ಕೊಳೆತು ನಾರುತ್ತಿವೆ. ಮೊದಲು ಅವುಗಳಿಗೆ ನ್ಯಾಯ ಕೊಡಿಸುವ ಬಗ್ಗೆ ಮುಖ್ಯಮಂತ್ರಿಗಳು ಯೋಚಿಸಲಿ. ಗಾಜಿನ ಮನೆಯಲ್ಲಿ ಕುಳಿತು ಹೊರಗಿನವರಿಗೆ ಕಲ್ಲು ಹೊಡೆಯುವ ದುಸ್ಸಾಹಸ ಬೇಡ ಎಂದು ರಾಮು ನಾಯ್ಕ ಸಲಹೆ ನೀಡಿದ್ದಾರೆ.







