ಯಲ್ಲಾಪುರ ತಾಲೂಕಿನ ಬಿಸಗೋಡ ಭಾಗದಲ್ಲಿ ಅಪರೂಪದ ಹಾವಿನ ಪ್ರಬೇಧವೊಂದು ಪತ್ತೆಯಾಗಿದೆ.
ಎನಿಮಲ್ ವೆಲ್ ಫೇರ್ ಆ್ಯಂಡ್ ರಿಸರ್ಚ್ ಫೌಂಡೇಷನ್ ನ ಅಧ್ಯಕ್ಷ ದತ್ತಾತ್ರೇಯ ಮುರ್ಕುಡೆ ಹಾಗೂ ಅಕ್ಬರ್ ಅಲಿ ಶೇಖ್ ಅವರಿಗೆ ಈ ಅಪರೂಪದ ಹಾವು ಕಂಡು ಬಂದಿದೆ.
ಸ್ಟ್ರಿಪೆಡ್ ಕೋರಲ್ ಸ್ನೇಕ್ ಎಂಬ ಪ್ರಬೇಧಕ್ಕೆ ಸೇರಿದ ಈ ಹಾವಿಗೆ ಕ್ಯಾಲಿಯೋಪಿಸ್ ನಿಗ್ರೆಸೆನ್ಸಸ್ ಎಂಬ ವೈಜ್ಞಾನಿಕ ಹೆಸರಿದೆ. ಈ ಜಾತಿಯಲ್ಲಿ 20-25 ಪ್ರಬೇಧಗಳನ್ನು ಗುರುತಿಸಲಾಗಿದೆ. ಅದರೆ ಇಲ್ಲಿ ಸಿಕ್ಕಿರುವುದು ಅವೆಲ್ಲಕ್ಕಿಂತ ಭಿನ್ನ ಮತ್ತು ಅಪರೂಪದ್ದಾಗಿದೆ.
ಹಾವಿನ ಮೇಲ್ಮೈ ಕಂದು ಬಣ್ಣದಲ್ಲಿದ್ದು, ಅಲ್ಲಲ್ಲಿ ಕಪ್ಪುಚುಕ್ಕೆಗಳಿವೆ. ಅಡಿಭಾಗ ಕೇಸರಿಮಯವಾಗಿದೆ. ಅತ್ಯಂತ ಅಪಾಯಕಾರಿ ಹಾಗೂ ವಿಷಕಾರಿಯಾದ ಈ ಹಾವು ಕಚ್ಚಿದರೆ ಯಾವುದೇ ಚಿಕಿತ್ಸೆ, ಔಷಧಿ ಇಲ್ಲ.
ಈ ಪ್ರಬೇಧದ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆದರೆ ಜನರಲ್ಲಿ ಜಾಗೃತಿ ಮೂಡಿಸಬಹುದು. ಸಂಶೋಧನೆಗೆ ಅರಣ್ಯ ಇಲಾಖೆಯ ಪ್ರೋತ್ಸಾಹ, ಸಹಕಾರ ದೊರೆತರೆ ಇನ್ನಷ್ಟು ಮಾಹಿತಿ, ಅರಿವು ಪಡೆದುಕೊಳ್ಳಬಹುದೆಂದು ಎನಿಮಲ್ ವೆಲ್ ಫೇರ್ ಆ್ಯಂಡ್ ರಿಸರ್ಚ್ ಫೌಂಡೇಷನ್ ನ ಅಧ್ಯಕ್ಷ ದತ್ತಾತ್ರೇಯ ಮುರ್ಕುಡೆ ಹೇಳಿದ್ದಾರೆ.







