ಯಲ್ಲಾಪುರದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಹೋರಾಟಗಾರರ ಸಂಘಟನೆಯ ಪ್ರಮುಖರೊಂದಿಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಅಹಿಂಸಾ ಸಂವಾದ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, ಸಮ ಸಮಾಜ ನಿರ್ಮಾಣದ ಚಿಂತನೆಯೊಂದಿಗೆ ಸಾಮಾಜಿಕ ಪರಿವರ್ತನೆ ತರುವ ಉದ್ದೇಶದಿಂದ ರಾಜ್ಯದಾದ್ಯಂತ ಓಡಾಡುತ್ತಿರುವುದಾಗಿ ಹೇಳಿದರು.
ರೈತರ, ಕಾರ್ಮಿಕರ ಶಿಕ್ಷಣ,ಆರೋಗ್ಯ ವಿಷಯದಲ್ಲಿ ಕಾರ್ಯನಿರ್ವಹಿಸುವ, ಹೋರಾಡುವ ಸಂಘಟನೆಗಳನ್ನು ಒಂದು ಸಿದ್ಧಾಂತದ ಅಡಿಯಲ್ಲಿ ಒಗ್ಗೂಡಿಸುವ ಮೂಲಕ ರಾಜಕೀಯ ಪರಿವರ್ತನೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದ ಅವರು, ಈಗಾಗಲೇ ಉಡುಪಿ,ಮಂಗಳೂರು, ಬೈಂದೂರು, ಉತ್ತರ ಕನ್ನಡ ಸೇರಿದಂತೆ ರಾಜ್ಯದ 163 ಮತಕ್ಷೇತ್ರದಲ್ಲಿ ಓಡಾಡಿದ್ದೇನೆ. ಕರ್ನಾಟಕದ ರಾಜಕಾರಣದಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸುವ ಕನಸು ಹೊಂದಿದ್ದೇನೆ ಎಂದರು.
ಸದ್ಯ ಆಳುವ ಶಕ್ತಿಗಳು ಸ್ವಾರ್ಥದಲ್ಲಿ ಮುಳುಗಿದೆ. ಇದರಿಂದ ಹೊರತಾದ ಹೊಸ ಪರಿವರ್ತಿತ ಸಮಾಜ ತರುವ ಪ್ರಯತ್ನ ನಮ್ಮದು. 2027 ರ ಹೊತ್ತಿಗೆ ಪಕ್ಷವೊಂದನ್ನು ಸ್ಥಾಪಿಸಿ, ತಳಮಟ್ಟದವರೆಗೆ ಗಟ್ಟಿಯಾದ ಸಂಘಟನೆ ಮಾಡಿ 2028 ರ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆಯಿದೆ. ಎಲ್ಲೆಡೆ ನಮ್ಮ ಆಶಯಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ತಿಳಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ವಿಲ್ಸನ್ ಫರ್ನಾಂಡೀಸ್, ಶಂಶುದ್ದೀನ್ ಮಾರ್ಕರ್, ಭೀಮ ಆರ್ಮಿ ಸಂಘಟನೆಯ ತಾಲೂಕಾಧ್ಯಕ್ಷ ಸೂರಜ್ ಡಯಾಸ್ ಸಿದ್ದಿ, ಮನ್ವೆಲ್ ಫರ್ನಾಂಡೀಸ್, ಸಲೀಮ್, ಶಿವಪ್ಪ ಸಿದ್ದಿ,
ಶಫಿ ಎಂ ಶೇಖ್, ಬಸವರಾಜ ಬಿ ಎಂ, ಅರ್ಜುನ, ಚನ್ನಪ್ಪ ಹರಿಜನ ಇತರರಿದ್ದರು.







