ಯಲ್ಲಾಪುರದ ಸಬಗೇರಿ ಬಳಿ ನೂತನ ಶೋರೂಂ ಉದ್ಘಾಟನೆಯ ಕಾರ್ಯಕ್ರಮ ಶಾಸಕ ಹೆಬ್ಬಾರ್ ಹಾಗೂ ಬಿಜೆಪಿ ಮುಖಂಡ ಪ್ರಮೋದ ಹೆಗಡೆ ಅವರ ನಡುವೆ ಜಿ.ಎಸ್.ಟಿ ಸುಧಾರಣೆ ವಿಚಾರದ ಕುರಿತಂತೆ ಪರ ವಿರೋಧದ ಮಾತುಗಳಿಗೆ ಸಾಕ್ಷಿಯಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ ಮೊದಲು ಮಾತನಾಡಿದರು. ನಂತರ ಮಾತಿಗೆ ನಿಂತ ಪ್ರಮೋದ ಹೆಗಡೆ, ಜಿ.ಎಸ್.ಟಿ ಸುಧಾರಣಾ ವಿಷಯ ಪ್ರಸ್ತಾಪಿಸಿ, ಜಿ.ಎಸ್.ಟಿ ಇಳಿಕೆಯಿಂದ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಶಾಸಕರು, ‘ ಮೊದಲು ಜಿ.ಎಸ್.ಟಿ ಪ್ರಮಾಣವನ್ನು ಏರಿಸಿದರು, ಈಗ ಇಳಿಸಿದ್ದಾರೆ. ಏರಿಸಿ, ಇಳಿಕೆ ಮಾಡಿರುವುದರಲ್ಲಿ ಯಾವ ವಿಶೇಷತೆ ಇಲ್ಲ’ ಎಂದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಪ್ರಮೋದ ಹೆಗಡೆ, ‘ ಮೊದಲಿನ ಸರ್ಕಾರಗಳೆಲ್ಲ ಕೇವಲ ದರ ಏರಿಕೆಯ ಪರಂಪರೆ ಅನುಸರಿಸಿದ್ದವು. ಏರಿಸುವುದು ಮಾತ್ರ ಗೊತ್ತಿತ್ತೇ ವಿನಃ, ಇಳಿಸುವ ಕ್ರಮ ಇರಲಿಲ್ಲ. ಮೋದಿ ಸರ್ಕಾರ ಹಾಗೆ ಮಾಡಿಲ್ಲ, ಇಳಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದೆ’ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಖಾಸಗಿ ಕಾರ್ಯಕ್ರಮದಲ್ಲೂ ರಾಜಕೀಯದ ವಿಚಾರಗಳ ಚರ್ಚೆಯ ಈ ಪ್ರಹಸನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರಿಗೆ ಮನರಂಜನೆ ನೀಡಿದ್ದು ಸುಳ್ಳಲ್ಲ.







