ಯಲ್ಲಾಪುರ ತಾಲೂಕಿನ ಕಾನೂರು ಜಲಪಾತದಲ್ಲಿ ಬಿದ್ದು ಕಾಣೆಯಾದ ಯುವಕನ ಶವ ಬುಧವಾರ ಪತ್ತೆಯಾಗಿದೆ.
ಕಾಣೆಯಾದ ಧಾರವಾಡ ಮೂಲದ ಸೋಹೆಲ್ ಖಾನ್ ಗಾಗಿ ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿಗಳು, ಅಗ್ನಿಶಾಮಕ ದಳದವರು, ಸ್ಥಳೀಯರು ಶೋಧ ನಡೆಸಿದ್ದರು.
ಹಳಿಯಾಳದ ದೇಶಪಾಂಡೆ ಇಂಜಿನಿಯರಿಂಗ್ ಕಾಲೇಜಿನ 4 ನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿರುವ ಸೋಹೆಲ್, ತನ್ನ ಸಹಪಾಠಿಗಳಾದ ಅಮಾನ್, ಶ್ರೀವಾಸ್ತ, ತಂಜಿಲ್, ನೇಹಾ, ಮಹಿಮಾ, ಸುರಭಿ, ಸುಶ್ಮಿತಾ ಅವರೊಂದಿಗೆ ಪ್ರವಾಸಕ್ಕೆಂದು ಕಾನೂರಿಗೆ ಬಂದಿದ್ದರು.
ಜಲಪಾತ ವೀಕ್ಷಿಸಿ, ಮರಳಿ ಊರಿಗೆ ಹೊರಡಬೇಕೆಂಬ ತಯಾರಿ ನಡೆಸುವಾಗಲೇ ಸೋಹೆಲ್, ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಕಾಣೆಯಾಗಿದ್ದರು.
ವಿಷಯ ತಿಳಿದ ತಕ್ಷಣ ಗ್ರಾಮ ಅರಣ್ಯ ಸಮಿತಿಯವರು, ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದು, ರಾತ್ರಿ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸಿದಾಗ ಶವ ಪತ್ತೆಯಾಗಿದೆ.







