ಸಾಹಿತ್ಯ ಲೋಕದ ದಿಗ್ಗಜ ಡಾ.ಎಸ್.ಎಲ್ ಭೈರಪ್ಪ ಬುಧವಾರ ನಿಧನರಾಗಿದ್ದಾರೆ. ಅಮೂಲ್ಯವಾದ 21 ಕಾದಂಬರಿಗಳನ್ನು ಸಾರಸ್ವತಲೋಕಕ್ಕೆ ಕೊಟ್ಟಿರುವ ಅವರು, ಪ್ರತಿ ಕಾದಂಬರಿಯ ರಚನೆಗೂ ಮುನ್ನ ಮಾಡುತ್ತಿದ್ದ ಪೂರ್ವಸಿದ್ಧತೆಯ ವಿಷಯದಲ್ಲಿ ಅವರಿಗೆ ಅವರೇ ಸಾಟಿ.
2002 ರಲ್ಲಿ ಪ್ರಕಟಗೊಂಡ ಮಂದ್ರ ಕಾದಂಬರಿಯ ರಚನೆಗೂ ಮುನ್ನ ಸಿದ್ಧತೆಗಾಗಿ ಭೈರಪ್ಪ ಯಲ್ಲಾಪುರಕ್ಕೆ ಬಂದಿದ್ದರು. ‘ಮಂದ್ರ’ ಪಂಡಿತ್ ಮೋಹನಲಾಲ್ ಎಂಬ ಸಂಗೀತಗಾರನ ಬದುಕಿನ ಕಥೆ-ವ್ಯಥೆಯನ್ನೊಳಗೊಂಡ ಕಾದಂಬರಿ. ಸಂಗೀತಗಾರನ ಬದುಕಿನ ಬಗ್ಗೆ ಬರೆಯುವ ಮುನ್ನ ಭೈರಪ್ಪ, ಸಂಗೀತದಲ್ಲಿ ರಾಗ, ತಾಳಗಳ ಸೂಕ್ಷ್ಮಗಳನ್ನು, ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು.
ಖ್ಯಾತ ಗಾಯಕ ಪಂಡಿತ್ ಗಣಪತಿ ಭಟ್ಟ ಹಾಸಣಗಿ ಅವರ ಮನೆಯಲ್ಲೇ ಬಂದು ಕೆಲ ದಿವಸಗಳ ಕಾಲ ವಾಸ್ತವ್ಯ ಮಾಡಿದ್ದ ಭೈರಪ್ಪ, ರಾಗಗಳ ಬಗ್ಗೆ ಜ್ಞಾನ, ಗಾಯನದಲ್ಲಿನ ಸೂಕ್ಷ್ಮತೆಗಳ ಬಗ್ಗೆ ತಿಳುವಳಿಕೆಯನ್ನು ಭಟ್ಟರಿಂದ ಪಡೆದಿದ್ದರು. ಪ್ರತಿನಿತ್ಯ ಗಣಪತಿ ಭಟ್ಟರ ಸಂಗೀತಾಭ್ಯಾಸವನ್ನು ಆಸಕ್ತಿಯಿಂದ ಗಮನಿಸಿ, ನಂತರ ಅವರಿಂದ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು.
ಈ ವಿಷಯವನ್ನು ‘ಮಂದ್ರ’ ಕಾದಂಬರಿಯ ಆರಂಭದಲ್ಲೂ ಪ್ರಸ್ತಾಪಿಸಿದ್ದಾರೆ. ಸಂಗೀತದ ಸೂಕ್ಷ್ಮ ವಿವರಗಳನ್ನು ತಿಳಿಯಲು, ಗ್ರಂಥಗಳನ್ನು ಓದಲು ಹಾಸಣಗಿ ಗಣಪತಿ ಭಟ್ಟರು ಮಾರ್ಗದರ್ಶನ ಮಾಡಿದರು. ಕಾದಂಬರಿಯ ಹಸ್ತಪ್ರತಿಯನ್ನು ಎರಡು ಬಾರಿ ಸಂಪೂರ್ಣ ಓದಿ ಪರಿಶೀಲಿಸಿದರು ಎಂದು ಭೈರಪ್ಪ ಉಲ್ಲೇಖಿಸಿದ್ದಾರೆ.
ಭೈರಪ್ಪನವರೊಂದಿಗಿನ ಒಡನಾಟವನ್ನು ಸ್ಮರಿಸಿರುವ ಪಂಡಿತ್ ಗಣಪತಿ ಭಟ್ಟರು, ಶ್ರೇಷ್ಠ ಸಾಹಿತಿ ಭೈರಪ್ಪ ಅವರು ನಮ್ಮೊಡನೆ ತುಂಬಾ ಆತ್ಮೀಯತೆ ಹೊಂದಿದ್ದರು. ಅದೇ ನಂಟಿನಿಂದ ನಮ್ಮ ಮನೆಗೆ ಬಂದು ಹೋಗಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.







