ರಾಜ್ಯ ಸರ್ಕಾರದ ಜಾತಿ ಗಣತಿ ಕಾರ್ಯ ನೂರೆಂಟು ವಿಘ್ನಗಳಿಂದಾಗಿ ಕುಂಟು ಹಾಕುತ್ತಿದೆ. ಆರಂಭವಾಗಿ 5 ದಿನಗಳು ಕಳೆದರೂ ತಾಂತ್ರಿಕ ಸಮಸ್ಯೆ ಶಿಕ್ಷಕರನ್ನು ಹೈರಾಣಾಗಿಸಿದೆ. ಸಮಸ್ಯೆ ಆಲಿಸಿ ಪರಿಹಾರೋಪಾಯ ಕೈಗೊಳ್ಳಬೇಕಿದ್ದ ಬಿಸಿಎಂ ಅಧಿಕಾರಿ ಶಿಕ್ಷಕರ ಬಗ್ಗೆಯೇ ಅಪಸ್ವರ ಎತ್ತಿದ್ದು, ಯಲ್ಲಾಪುರದಲ್ಲಿ ಶಿಕ್ಷಕರ ದಿಢೀರ್ ಪ್ರತಿಭಟನೆಗೆ ಕಾರಣವಾಯಿತು.
ತಾಂತ್ರಿಕ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲು ಗಣತಿದಾರರು ತಹಸೀಲ್ದಾರ ಕಚೇರಿಗೆ ಬಂದಿದ್ದರು. ಗಣತಿದಾರರು ಗಣತಿಗೆ ಹೋದ ಸಂದರ್ಭದಲ್ಲಿ ಉಂಟಾಗುತ್ತಿರುವ ತೊಡಕುಗಳ ಬಗ್ಗೆ ವಿವರಿಸುತ್ತಿರುವಾಗ, ಏಕಾಏಕಿ ಕೋಪಗೊಂಡ ಬಿಸಿಎಂ ವಿಸ್ತರಣಾಧಿಕಾರಿ ದಾಕ್ಷಾಯಿಣಿ ನಾಯ್ಕ, ಶಿಕ್ಷಕರ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ.
ತರಬೇತಿಯಲ್ಲಿ ಸರಿಯಾಗಿ ತಿಳಿದುಕೊಳ್ಳದೇ ಈಗ ಬಂದು ಗಲಾಟೆ ಮಾಡುತ್ತಿದ್ದೀರಿ, ಸರಿಯಾಗಿ ತಿಳಿದುಕೊಳ್ಳುವ ಸಹನೆಯೂ ಇಲ್ಲ, ಅನಗತ್ಯವಾಗಿ ದೊಂಬಿ ಮಾಡಲು ಇಲ್ಲಿಗೆ ಬಂದಿದ್ದೀರಿ ಎಂದು ಬೇಜವಾಬ್ದಾರಿಯುತವಾಗಿ ಮಾತನಾಡಿದರು.
ಶಿಕ್ಷಕಿಯೊಬ್ಬರು ಗಣತಿಗೆಂದು ಮನೆಯೊಂದಕ್ಕೆ ಹೋಗಿದ್ದು ಅಲ್ಲಿ ಒಬ್ಬ ಪುರುಷ ಮಾತ್ರ ಇದ್ದರು. ತಾಂತ್ರಿಕ ಸಮಸ್ಯೆಯಿಂದ ಗಣತಿ ಆಗದೇ 3-4 ತಾಸುಗಳ ಕಾಲ ಶಿಕ್ಷಕಿ ಅಲ್ಲೇ ಇರುವಂತಾಯಿತು. ಈ ವಿಷಯವಾಗಿ ಆ ವ್ಯಕ್ತಿಯ ಪತ್ನಿ ಕರೆ ಮಾಡಿ ಪತಿಯನ್ನು ತರಾಟೆಗೆ ತೆಗೆದುಕೊಂಡರಂತೆ. ತಾಂತ್ರಿಕ ಸಮಸ್ಯೆಯಿಂದ ಇಂತಹ ಸಂದಿಗ್ಧತೆಯನ್ನು ಗಣತಿಯ ವೇಳೆ ಎದುರಿಸಬೇಕಾಯಿತೆಂದು ಸಮಸ್ಯೆಯನ್ನು ಹೇಳಿಕೊಂಡ ಶಿಕ್ಷಕಿಗೆ ಬಿಸಿಎಂ ಅಧಿಕಾರಿ ದಾಕ್ಷಾಯಿಣಿ ನಾಯ್ಕ, ‘ಅದು ನಿಮ್ಮ ವೈಯಕ್ತಿಕ ಸಮಸ್ಯೆ, ನಾವೇನೂ ಮಾಡಲು ಸಾಧ್ಯವಿಲ್ಲ’ ಬಂದಿದ್ದಾರೆ. ಅಲ್ಲದೇ ಶಿಕ್ಷಕಿಗೆ ಗಣತಿ ಕೆಲಸ ಮಾಡಲು ನೀವು ‘ಅಸಮರ್ಥರು. ನಿಮ್ಮ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ’ ಎಂದು ಎಲ್ಲ ಶಿಕ್ಷಕರೆದುರೇ ಬೆದರಿಸಿದ್ದಾರೆ. ಇದರಿಂದ ಕೋಪಗೊಂಡ ಶಿಕ್ಷಕರು, ಅವರೊಬ್ಬರೇ ಅಲ್ಲ ನಾವೆಲ್ಲರೂ ಅಸಮರ್ಥರು, ನಮ್ಮ ಮೇಲೂ ಕ್ರಮ ಕೈಗೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್.ಭಟ್ಟ ಸ್ಥಳಕ್ಕೆ ಬಂದು, ಶಿಕ್ಷಕರಿಗೆ ಅಗೌರವ ತೋರಿದ ಅಧಿಕಾರಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ತಾಲೂಕಿನಲ್ಲಿ ಗಣತಿ ಕಾರ್ಯ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಾನು ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ ಅಧಿಕಾರಿ, ತಹಸೀಲ್ದಾರ ಕಚೇರಿಯ ಒಳಗೆ ಹೋದರು.
ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಬಂದು ಶಿಕ್ಷಕರ ಸಮಸ್ಯೆಯನ್ನು ಸಹನೆಯಿಂದ ಆಲಿಸಿದರು. ದಾಕ್ಷಾಯಿಣಿ ನಾಯ್ಕ ಪರವಾಗಿ ತಾವು ಕ್ಷಮೆ ಕೇಳುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಶಿಕ್ಷಕರು, ನೀವು ಕ್ಷಮೆ ಕೇಳುವುದು ಬೇಡ, ನಿಮ್ಮ ಬಗ್ಗೆ ಗೌರವವಿದೆ. ಅವರೇ ಬಂದು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು.
ಆಗ ತಹಸೀಲ್ದಾರ ಕಚೇರಿಯಿಂದ ಹೊರ ಬಂದ ದಾಕ್ಷಾಯಿಣಿ ನಾಯ್ಕ, ನಾನು ಸರ್ಕಾರದ ನಿಯಮದಂತೆ ಕಾರ್ಯನಿರ್ವಹಿಸಿದ್ದೇನೆ. ಕ್ಷಮೆ ಕೇಳುವಂತಹ ಯಾವ ತಪ್ಪೂ ಮಾಡಿಲ್ಲ, ಕ್ಷಮೆ ಕೇಳುವುದಾದರೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಕೇಳುತ್ತೇನೆ. ನನ್ನ ವಿರುದ್ಧ ಕ್ರಮ ಕೈಗೊಳ್ಳುವುದಾದರೂ ಯಾವ ಅಭ್ಯಂತರವಿಲ್ಲ ಎಂದರು.
ತಹಸೀಲ್ದಾರರು ಪುನಃ ಅವರನ್ನು ಚೇಂಬರ್ ಗೆ ಕರೆದೊಯ್ದು, ಮನವೊಲಿಸುವ ವಿಫಲ ಯತ್ನ ನಡೆಸಿದರು. ಕೊನೆಗೆ ಹೊರಬಂದ ತಹಸೀಲ್ದಾರ, ದಾಕ್ಷಾಯಿಣಿ ನಾಯ್ಕ ಕ್ಷಮೆ ಕೇಳಲು ಸಿದ್ಧರಿಲ್ಲ. ಹಾಗಾಗಿ ಅವರನ್ನು ಗಣತಿಯ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದೇವೆ. ಬೇರೆ ಅಧಿಕಾರಿ ನೇಮಕಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು. ಗಣತಿಯಲ್ಲಿ ಭಾಗವಹಿಸಲು ಇಚ್ಛಿಸದೇ ಇದ್ದರೆ ಅಂತಹ ಶಿಕ್ಷಕರು ಲಿಖಿತವಾಗಿ ಮನವಿ ನೀಡಿದರೆ, ಬೇರೆಯವರನ್ನು ನೇಮಿಸಿಕೊಳ್ಳಲಾಗುವುದು ಎಂದರು. ನಂತರ ಶಿಕ್ಷಕರು ಧರಣಿ ಕೈಬಿಟ್ಟು, ಗಣತಿಯ ಕಾರ್ಯಕ್ಕೆ ತೆರಳಿದರು.







