ಗೋಡಂಬಿ ಸಿಪ್ಪೆಯಿಂದ ಕಾರ್ಬನ್ ಚಾರ್ ತಯಾರಿಸಿ ಅದನ್ನು ಕಲ್ಲಿದ್ದಲಿನ ಪರ್ಯಾಯ ಇಂಧನವಾಗಿ ಬಳಸುವ ಹೊಸ ಮಾರ್ಗವನ್ನು ಸಂಶೋಧನೆಯೊಂದು ಪರಿಚಯಿಸಿದೆ.
ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಕೆ. ನಾಗರಾಜ ಹೆಗಡೆ ಚಿಕ್ಕೊರಗಿ ಮತ್ತು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಪ್ರವೀಣ್ ಎಸ್. ಮುಗಳಿ ಅವರು ಈ ಸಂಶೋಧನೆ ನಡೆಸಿದ್ದಾರೆ.
ಈ ಸಂಶೋಧನೆಯಲ್ಲಿ ಗೋಡಂಬಿ ಸಿಪ್ಪೆಗಳನ್ನು ಪೈರೋಲಿಸಿಸ್ ವಿಧಾನದಿಂದ ಪ್ರಕ್ರಿಯೆಗೊಳಿಸಿ, ಫಾಸ್ಫೋರಿಕ್ ಆಸಿಡ್ನ ರಾಸಾಯನಿಕ ಕ್ರಿಯೆಯಿಂದ ಚಾರ್ನ ಗುಣಮಟ್ಟವನ್ನು ಹೆಚ್ಚಿಸಲಾಗಿದೆ.
ಫಲಿತಾಂಶವಾಗಿ, ಕಡಿಮೆ ಬೂದಿ ಅಂಶ (7%) ಹೊಂದಿದ, ಹೆಚ್ಚಿನ ಶೋಷಣ ಸಾಮರ್ಥ್ಯದ ಕಾರ್ಬನ್ ಚಾರ್ ದೊರೆತಿದ್ದು, ಕೈಗಾರಿಕಾ ಇಂಧನ ಹಾಗೂ ಪರಿಸರ ಸ್ನೇಹಿ ಪರ್ಯಾಯವಾಗಿ ಬಳಸಲು ಇದು ಅನುಕೂಲಕರವಾಗಿದೆ.
ಕೃಷಿ ತ್ಯಾಜ್ಯವನ್ನು ಶಕ್ತಿಯ ಮೂಲವನ್ನಾಗಿ ಪರಿವರ್ತಿಸುವ ಮೂಲಕ, ತ್ಯಾಜ್ಯ ನಿರ್ವಹಣೆ ಹಾಗೂ ಶಾಶ್ವತ ಇಂಧನದ ಅಗತ್ಯಗಳನ್ನು ಪೂರೈಸುವ ದ್ವಂದ್ವ ಪ್ರಯೋಜನವನ್ನು ಈ ಸಂಶೋಧನೆ ಒದಗಿಸಿದೆ ಎಂದು ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವರ ಸಂಶೋಧನಾ ಲೇಖನ Poornaprajna International Journal of Basic & Applied Sciences ಎಂಬ ಅಂತಾರಾಷ್ಟ್ರೀಯ ಪತ್ರಿಕೆಯಲ್ಲೂ ಪ್ರಕಟವಾಗಿದೆ.







