ಯಲ್ಲಾಪುರ ತಾಲೂಕಿನಲ್ಲಿ ಜಾತಿ ಗಣತಿಯ ಅವ್ಯವಸ್ಥೆ, ತಾಂತ್ರಿಕ ಸಮಸ್ಯೆ ಶುಕ್ರವಾರವೂ ಮುಂದುವರಿದಿದೆ.
ಗಣತಿಗೆ ಹೋದವರಿಗೆ ನಿತ್ಯವೂ ಹೊಸ ಹೊಸ ಸಮಸ್ಯೆ ಎದುರಾಗುತ್ತಿದೆ. ಆದರೆ ಅದನ್ನು ಹೇಳಿಕೊಂಡರೆ, ಅಧಿಕಾರಿಗಳ ಬಳಿಯೂ ಉತ್ತರವಿಲ್ಲದಂತಾಗಿದೆ.
ಶಿಕ್ಷಕಿಯೊಬ್ಬರು ತಮ್ಮ ಮೊಬೈಲ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ಗಣತಿ ಕಾರ್ಯಕ್ಕಾಗಿ ಬೇರೆಯವರ ಮೊಬೈಲ್ ಬಾಡಿಗೆಗೆ ಪಡೆದಿದ್ದಾರಂತೆ. ಗಣತಿಯೂ ಆಗುತ್ತಿಲ್ಲ, ಬಾಡಿಗೆ ನೀಡುವುದೂ ತಪ್ಪುತ್ತಿಲ್ಲ!
ಶಿಕ್ಷಕಿಯೊಬ್ಬರು ಗಣತಿಗೆಂದು ಮನೆಯೊಂದಕ್ಕೆ ಹೋಗಿದ್ದು ಅಲ್ಲಿ ಒಬ್ಬ ಪುರುಷ ಮಾತ್ರ ಇದ್ದರು. ತಾಂತ್ರಿಕ ಸಮಸ್ಯೆಯಿಂದ ಗಣತಿ ಆಗದೇ 3-4 ತಾಸುಗಳ ಕಾಲ ಶಿಕ್ಷಕಿ ಅಲ್ಲೇ ಇರುವಂತಾಯಿತು. ಈ ವಿಷಯವಾಗಿ ಆ ವ್ಯಕ್ತಿಯ ಪತ್ನಿ ಕರೆ ಮಾಡಿ ಪತಿಯನ್ನು ತರಾಟೆಗೆ ತೆಗೆದುಕೊಂಡರಂತೆ.
ಗಣತಿಗೆ ಹೋಗಿದ್ದ ಶಿಕ್ಷಕಿಯೊಬ್ಬರು ತಲೆಸುತ್ತಿ ಬಂದು ಬಿದ್ದ ಘಟನೆ ನಡೆದಿದೆ. ಗಣತಿಗೆ ಹೋದಾಗ ಶಿಕ್ಷಕಿಯೊಬ್ಬರಿಗೆ ನಾಯಿ ಕಚ್ಚಿ ಗಾಯಗೊಳಿಸಿದ ಘಟನೆಯೂ ನಡೆದಿದೆ. ಕೆಲವರಂತೂ ಸರ್ಕಾರದ ಮೇಲಿನ ಕೋಪವನ್ನು ಗಣತಿಗೆ ಬಂದ ಶಿಕ್ಷಕರ ಮೇಲೆ ತೀರಿಸಿಕೊಳ್ಳುತ್ತಿರುವುದೂ ಇದೆ.







