ಯಲ್ಲಾಪುರದ ಮಂಜುನಾಥ ನಗರ ವಾರ್ಡ್ ಹಾಲಿ ಪಟ್ಟಣ ಪಂಚಾಯತ್ ಸದಸ್ಯ ಸತೀಶ್ ಶಿವಾನಂದ ನಾಯ್ಕ್ ಅವರಿಗೆ ಯಲ್ಲಾಪುರ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸ್ಥಾನ ಒಲಿದಿದೆ.
ಈ ಬಗ್ಗೆ ನೇಮಕ ಮಾಡಿ ಕೆಪಿಸಿಸಿ ಆದೇಶ ಹೊರಡಿಸಿದೆ. ಕಳೆದ ಎರಡು ದಶಕಗಳಿಗೂ ಅಧಿಕ ಸಮಯದಿಂದ ವ್ಯಕ್ತಿ ನಿಷ್ಠೆಯಿಂದ ಶಾಸಕ ಶಿವರಾಮ ಹೆಬ್ಬಾರ್ ನೆರಳಲ್ಲಿ ಬೆಳೆದು ಬಂದವರು ಸತೀಶ.
ಹೆಬ್ಬಾರ್ ಅವರ ಮೇಲಿನ ಪ್ರೀತಿ ಮತ್ತು ಭಕ್ತಿಯಿಂದ ಅವರು ಯಾವುದೇ ಪಕ್ಷದಲ್ಲಿದ್ದರೂ ಹಗಲು ರಾತ್ರಿ ಎನ್ನದೇ ಬ್ಯಾನರ್, ಬಂಟಿಂಗ್ಸ್ ಕಟ್ಟಿದ ಸತೀಶ್ ಶಿವಾನಂದ ನಾಯ್ಕ್ ಮೂಲತಃ ಯಲ್ಲಾಪುರ ಮಂಜುನಾಥ ನಗರ ಮೂಲ ನಿವಾಸಿ.
ಬಾಲ್ಯದಿಂದಲೂ ಸಮಾಜ ಸೇವೆಯ ಉತ್ಸುಕತೆಯಿಂದ ಬೆಳೆಯುತ್ತಾ ಬಂದ ಸತೀಶ, ಆಪತ್ಕಾಲದಲ್ಲಿ ಎಂತಹ ಸಮಸ್ಯೆಗಳಿದ್ದರೂ ಸಹಾಯಕ್ಕೆ ಧಾವಿಸಿ ತನ್ನ ಕೈಲಾದ ಸೇವೆ ಸಲ್ಲಿಸುವ ಉತ್ಸಾಹಿ. ಕಲೆ, ಸಾಹಿತ್ಯ ಇನ್ನಿತರ ಸಾಂಸ್ಕೃತಿಕ ವೇದಿಕೆಗಳನ್ನು ಸೃಷ್ಟಿಸಿ ಅನೇಕ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಇವರದು.
ಎಂತಹದೆ ಸಂದಿಗ್ದ ಸಂದರ್ಭದಲ್ಲಿಯು ಸಹ ಶಾಸಕ ಹೆಬ್ಬಾರ್ ಹಾಕಿದ ಗೆರೆ ದಾಟದ ಅಪ್ಪಟ ಅಭಿಮಾನಿಯಾಗಿದ್ದಾರೆ. ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮಂಜುನಾಥ ನಗರದಿಂದ ಸ್ಪರ್ಧಿಸಿ ಗೆದ್ದ ನಂತರ ಅಧ್ಯಕ್ಷ ಪಟ್ಟ ಸಿಗುವ ಅವಕಾಶವಿದ್ದರೂ ಹೆಬ್ಬಾರ್ ಅವರ ಅಣತಿಯಂತೆ ಪಟ್ಟದಿಂದ ದೂರವೆ ಇದ್ದ ಸತೀಶ ಅವರಿಗೆ ಇದೀಗ, ಯಲ್ಲಾಪುರ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸ್ಥಾನ ದೊರೆತಿದೆ.
ಶೀಘ್ರದಲ್ಲಿ ಪಟ್ಟಣ ಪಂಚಾಯತ್ ಅವಧಿ ಪೂರ್ಣಗೊಂಡು ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ನಗರ ಘಟಕದ ಅಧ್ಯಕ್ಷ ಸ್ಥಾನದ ಮೂಲಕ ಸಂಘಟನೆ ಕಟ್ಟುವ ಹೊಣೆ ಅವರದಾಗಿದೆ. ಉನ್ನತ ಸ್ಥಾನ ನೀಡಿದ ಕೆ.ಪಿ.ಸಿ.ಸಿ ಪ್ರಮುಖರಿಗೆ, ಶಾಸಕ ಹೆಬ್ಬಾರ್ ಅವರಿಗೆ, ಮಾಜಿ ಶಾಸಕ ವಿ.ಎಸ್.ಪಾಟೀಲ್ ಅವರಿಗೆ, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಅವರಿಗೆ, ಪ್ರಮುಖರಾದ ವಿಜಯ್ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್ ಭಟ್ ಅವರಿಗೆ ಹಾಗು ಪಕ್ಷದ ಎಲ್ಲಾ ಹಿರಿಯ ಪದಾಧಿಕಾರಿಗಳಿಗೆ ಸತೀಶ ನಾಯ್ಕ ಹಾಗೂ ಅಭಿಮಾನಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.







