ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಮುಂದಾದ ವಕೀಲ ಕಿಶೋರ ರಾಕೇಶ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ಧ್ವನಿ ಚಂದ್ರಕಾಂತ ಕಾದ್ರೋಳ್ಳಿ ಬಣದ ಜಿಲ್ಲಾ ಸಮಿತಿಯಿಂದ ಯಲ್ಲಾಪುರದಲ್ಲಿ ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ವಕೀಲ ಕಿಶೋರ ರಾಕೇಶ ನ್ಯಾಯಮೂರ್ತಿಗಳ ಪೀಠದ ಬಳಿ ಬಂದು ಶೂ ಎಸೆಯಲು ಯತ್ನಿಸಿದ ಘಟನೆ ಖಂಡನೀಯ. ಸನಾತನದ ಧರ್ಮದ ಹೆಸರು ಹೇಳಿಕೊಂಡು ಅಂಬೇಡ್ಕರ್ ಆಶಯಗಳ ಪ್ರತಿಪಾದಿತ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಶೂ ಎಸೆಯುವ ಯತ್ನ ನಡೆಸಿದ್ದಾರೆ. ಗವಾಯಿಯವರು ದಲಿತ ಸಮುದಾಯಕ್ಕೆ ಸೇರಿದ ಕಾರಣ ಆವರನ್ನು ಅವಮಾನಿಸಲು, ಅವರ ಗೌರವಕ್ಕರ ಧಕ್ಕೆ ತರಲು ಕೋಮುವಾದಿಗಳು ಸಂಚು ರೂಪಿಸಿ ಕಿಶೋರ ಅವರಿಂದ ಈ ಕೃತ್ಯ ಮಾಡಿಸಲು ಯತ್ನಿಸಿದ್ದಾರೆ.
ಘಟನೆಯು ಸಂವಿಧಾನದ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ನ್ಯಾಯಾಂಗದ ಘನತೆ ಹಾಗೂ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ. ನ್ಯಾಯಾಂಗ ನಿಂದನೆ ಮಾಡಿದ ಕಿಶೋರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯದಲ್ಲಿ ವಕಾಲತ್ತು ಮಾಡದಂತೆ ವಜಾ ಮಾಡಿ, ಗಡಿಪಾರು ಮಾಡಬೇಕು ಎಂದು ಸಂಘಟನೆಯ ಪ್ರಮುಖರು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ, ಬೆಳಗಾವಿ ವಿಭಾಗೀಯ ಅಧ್ಯಕ್ಷ ಕಲ್ಲಪ್ಪ ಕಾದ್ರೊಳ್ಳಿ, ಯಲ್ಲಾಪುರ ತಾಲೂಕಾಧ್ಯಕ್ಷ ಮಂಜುನಾಥ ನೀರಲಗಿ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ ಹರಿಜನ, ಪ್ರಚಾರ ಸಮಿತಿಯ ವಿಭಾಗೀಯ ಅಧ್ಯಕ್ಷ ರಮೇಶ ಚೆನ್ನಪ್ಪನವರ್, ಮುಂಡಗೋಡ ತಾಲೂಕು ಗೌರವಾಧ್ಯಕ್ಷ ಬಸವರಾಜ ನಡಕಿನಮನಿ, ಬೆಳಗಾವಿ ವಿಭಾಗದ ಎಸ್. ಟಿ.ಘಟಕದ ಅಧ್ಯಕ್ಷ ಮೆಹಬೂಬ್ ಸಾಬ ನಾಯ್ಕ, ತಾಲೂಕಾ ಸಮಿತಿಯ ಸದಸ್ಯರಾದ ಶಾಂತಾರಾಮ ನೇರಲಗಿ, ಮನವೇಲ್ ಸಿದ್ದಿ, ಕೃಷ್ಣ ಸಿದ್ದಿ, ಸೋಮನಾಥ ಸಿದ್ದಿ, ಅಣ್ಣಪ್ಪ ಸಿದ್ದಿ, ಜಯರಾನ ಸಿದ್ದಿ, ದತ್ತು ಸಿದ್ದಿ, ಸುರೇಶ ಸಿದ್ದಿ, ದರ್ಶನ ಸಿದ್ದಿ ಇತರರಿದ್ದರು.







