ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲೆ ಹಾಗೂ ತಾಲೂಕು ಸಮಿತಿಯಿಂದ ಯಲ್ಲಾಪುರದಲ್ಲಿ ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ನಮ್ಮ ಸಂವಿಧಾನ ಬಲಿಷ್ಠವಾಗಿದ್ದರೂ ನ್ಯಾಯಾಧೀಶರ ಮೇಲೆ ಶೂ ಎಸೆಯುವ ಯತ್ನ ನಡೆಸಿರುವುದು ಖಂಡನೀಯ. ದೇವರ ಸ್ಥಾನದಲ್ಲಿರುವ ನ್ಯಾಯಾಧೀಶರ ಮೇಲೆ ಈ ರೀತಿ ಮಾಡುವುದಕ್ಕೆ ಮುಂದಾದ ವ್ಯಕ್ತಿ ತನ್ನ ಪ್ರಚಾರಕ್ಕೋ ಅಥವಾ ದ್ವೇಷಕ್ಕೋ ಇಂತಹ ಉದ್ಧತಟನ ತೋರಿದ್ದಾನೆ.
ಈ ಕೃತ್ಯವನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಈ ವಕೀಲನನ್ನು ತಕ್ಷಣ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯ ಪ್ರಮುಖರು ಆಗ್ರಹಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಮಾರುತಿ ಬೋವಿವಡ್ಡರ್, ಜಗನ್ನಾಥ ರೇವಣಕರ್, ಕಲ್ಲಪ್ಪ ಹೋಳಿ, ಶೇಖರ ಸಿದ್ದಿ, ತೋಲಾರಾಮ ಅತ್ತರವಾಲಾ, ಸುನೀಲ ಕಾಂಬಳೆ, ಪೂಜಾ ನೇತ್ರೇಕರ್, ರವಿ ಪಾಟಣಕರ್, ಫಕೀರಪ್ಪ ಹರಿಜನ, ವಸಂತ ಮಾವಿನಕಟ್ಟಾ ಇತರರಿದ್ದರು.







