ಯಲ್ಲಾಪುರ ತಾಲೂಕಿನಾದ್ಯಂತ ಗ್ರಾಮೀಣ ಭಾಗದ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನ ಸವಾರರು ಏಳುತ್ತ ಬೀಳುತ್ತ ಸಾಗಬೇಕಾಗಿದೆ. ಸದ್ಯದ ಮಟ್ಟಿಗೆ ಸರ್ಕಾರದಿಂದ ರಸ್ತೆಯ ದುರಸ್ತಿ ಆಗಬಹುದೆಂಬ ನಿರೀಕ್ಷೆ ಮಾಡುವುದೂ ಮಹಾರಪರಾಧ! ಹಾಗಾಗಿ ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರೇ ತಾತ್ಕಾಲಿಕ ದುರಸ್ತಿಗೆ ಮುಂದಾಗುತ್ತಿದ್ದಾರೆ.
ಯಲ್ಲಾಪುರದ ಎಪಿಎಂಸಿಯಿಂದ ಹಲಸಖಂಡ-ಗುಂಡ್ಕಲ್ ರಸ್ತೆ ಹೊಂಡ-ಗುಂಡಿಗಳಿಂದಲೇ ತುಂಬಿ ಕೆಸರು ಗದ್ದೆಯಂತಾಗಿತ್ತು. ಜನ ಓಡಾಡಲು ತುಂಬಾ ಕಷ್ಟಪಡಬೇಕಾಗಿತ್ತು. ಹುಲೆಕೋಣೆ ಬಳಿಯಂತೂ ದೊಡ್ಡ ಹೊಂಡಗಳೇ ಉಂಟಾಗಿ, ಮಳೆಯ ನೀರೂ ಹೊಂಡದಲ್ಲಿ ನಿಂತು, ರಸ್ತೆಯಲ್ಲೇ ಕೆರೆಗಳ ನಿರ್ಮಾಣವಾದಂತೆ ಕಂಡು ಬರುತ್ತಿತ್ತು.
ಈ ರಸ್ತೆ ಅವ್ಯವಸ್ಥೆಗೆ ತಾತ್ಕಾಲಿಕವಾದ ಪರಿಹಾರ ಒದಗಿಸಲು ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಚಂದಗುಳಿ ಗ್ರಾ.ಪಂ ಸದಸ್ಯ ಸುಬ್ಬಣ್ಣ ಉದ್ದಾಬೈಲ ಅವರು ಮುಂದಾಗಿದ್ದು, ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿಸಿದ್ದಾರೆ. ರಸ್ತೆಯ ಹೊಂಡಗಳಿಗೆ ಮಣ್ಣು ಹಾಕಿ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಈ ಕೆಲಸಕ್ಕಾಗಿ ನಾಗರಾಜ ಕವಡಿಕೆರೆ ಅವರು ತಮ್ಮ ಜೆಸಿಬಿ ನೀಡಿದ್ದು, ಸುಬ್ಬಣ್ಣ ಉದ್ದಾಬೈಲ್ ಮಣ್ಣು ಸಾಗಿಸಲು ಟ್ರ್ಯಾಕ್ಟರ್ ನೀಡಿದ್ದಾರೆ. ಇನ್ನಷ್ಟು ಹೊಂಡಗಳನ್ನು ಮುಚ್ಚುವ ಕಾರ್ಯಕ್ಕೆ ನೆರವಾಗುವ ಭರವಸೆಯನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಎಲ್.ಪಿ.ಭಟ್ಟ ಗುಂಡ್ಕಲ್ ನೀಡಿದ್ದಾರೆ.
ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾದರೂ, ದುರಸ್ತಿಗೆ ಮೂರು ಕಾಸೂ ಬಾರದ ಕಾರಣ, ಸ್ಥಳೀಯ ಮುಖಂಡರೇ ರಸ್ತೆ ದುರಸ್ತಿಗೆ ಮುಂದಾಗುವ ಅನಿವಾರ್ಯತೆ ಬಂದಿರುವುದು ಸರ್ಕಾರದ ದುರವಸ್ಥೆಗೆ ಹಿಡಿದ ಕನ್ನಡಿಯಾಗಿದೆ.







