ಆರ್.ಎಸ್.ಎಸ್ ಒಂದು ರಾಜಕೀಯ ಸಂಘಟನೆ. ನಮ್ಮದು ರಾಜಕೀಯ ಸಂಘಟನೆಯಲ್ಲ ಎಂದು ಅವರು ಹೇಳಬಹುದು. ಆದರೆ ಸಂಘವು ರಾಜಕೀಯದಲ್ಲೇ ಮುಳುಗಿ ಹೋಗಿದೆ ಎಂಬ ಸಂಗತಿ ಇಡೀ ದೇಶಕ್ಕೆ ತಿಳಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ್ ಹೇಳಿದರು.
ಅವರು ಯಲ್ಲಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಆರ್.ಎಸ್.ಎಸ್ ನಿಷೇಧದ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ. ಆದರೆ, ಸರ್ಕಾರಿ ಶಾಲೆಗಳ ಆವಾರದಲ್ಲಿ ಸಂಘದ ಚಟುವಟಿಕೆಗಳು ನಡೆಯಬಾರದೆಂಬ ಪ್ರಸ್ತಾಪಕ್ಕೆ ನನ್ನ ಸಹಮತವಿದೆ. ಸರ್ಕಾರಿ ಕಟ್ಟಡಗಳು, ಅದರ ಆವಾರಗಳಲ್ಲಿ ಚಟುವಟಿಕೆಗಳು ನಡೆಯದಂತೆ ನಿಷೇಧ ಹೇರುವುದು ಸರಿಯಾದ ಕ್ರಮ ಎಂದರು.
ಸಚಿವ ಸಂಪುಟ ಪುನಾರಚನೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಸಚಿವ ಸ್ಥಾನ ಬಿಡುವಂತೆ ಹೈಕಮಾಂಡ್ ನಾಯಗಕರು ಸೂಚಿಸಿದರೆ ಅದಕ್ಕೂ ಸಿದ್ಧ ಎಂದರು.
ಬಿಜೆಪಿ ಶಾಸಕ ಮುನಿರತ್ನ ಅವರನ್ನು ‘ಕರಿಟೋಪಿ ಶಾಸಕ’ ಎಂದು ಕರೆದ ಉಪಮುಖ್ಯಮಂತ್ರಿಗಳನ್ನು ಸಮರ್ಥಿಸಿಕೊಂಡ ಸಚಿವರು, ಉಪಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬಂದು ಮುನಿರತ್ನ ಅವರು ಜನರಲ್ಲಿ ಏನೇನೋ ವಿಚಾರಗಳನ್ನು ಹಂಚಿಕೊಳ್ಳುತ್ತ, ಗೊಂದಲ ನಿರ್ಮಿಸುತ್ತಿದ್ದರು. ಇದನ್ನು ಕಂಡ ಡಿಕೆಶಿ ಅವರು ಹಾಗೆ ಕರೆದಿದ್ದಾರೆ. ಮುನಿರತ್ನ ಮೊದಲು ಕಾಂಗ್ರೆಸ್ ನಲ್ಲೇ ಇದ್ದವರು, ಡಿಕೆಶಿ ಅವರಿಗೆ ತುಂಬಾ ಆತ್ಮೀಯರೂ ಹೌದು, ಅದೇ ಆತ್ಮೀಯತೆಯಲ್ಲಿ ಹಾಗೆ ಕರೆದಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.







