ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಅ.19
ರಂದು ಬೆಳಗ್ಗೆ 10.30 ಕ್ಕೆ ಯಲ್ಲಾಪುರ ತಾಲೂಕಿನ ಮಂಚಿಕೇರಿ ಸಮೀಪದ ತುಂಬೆಬೀಡು ಬಳಿ ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಜನಜಾಗೃತಿ ಅಭಿಯಾನ ನಡೆಯಲಿದೆ. ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಅವರ ನೇತೃತ್ವದಲ್ಲಿ ಶಾಂತಿಯುತವಾಗಿ ಜನಜಾಗೃತಿ ಹೋರಾಟ ನಡೆಯಲಿದೆ.
ಪ್ರಸ್ತಾಪಿತ ಯೋಜನೆಗೆ ಸರ್ವೆ ಆಗಿಲ್ಲ, ಯಾವುದೇ ವಿಸ್ತ್ರತ ವರದಿ ಬಂದಿಲ್ಲ. ಯೋಜನೆಯ ತಡೆಗೆ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಆರಂಭದ ಹಂತದಲ್ಲಿಯೇ ಒತ್ತಡ ತರಬೇಕು. ಸಾರ್ವಜನಿಕರಲ್ಲಿ ಯೋಜನೆಯ ದುಷ್ಪರಿಣಾಮದ ಅರಿವು ಮೂಡಿಸಬೇಕು ಎಂಬುದು ಹೋರಾಟದ ಉದ್ದೇಶವಾಗಿದೆ.
ಯೋಜನೆಯ ಅನ್ವಯ ಆರಂಭದಲ್ಲಿ ಚಿಕ್ಕ ಡ್ಯಾಮ್ ನಿರ್ಮಿಸುತ್ತೇವೆ ಎನ್ನಲಾಗುತ್ತಿದೆ. ಅದನ್ನು ಯಾವಾಗ ಬೇಕಾದರೂ ಎತ್ತರಿಸಬಹುದು.15-20 ಟಿಎಂಸಿ ನೀರು ಸಿಗುತ್ತದೆ. ಮಳೆಗಾಲದಲ್ಲಿ ಮಾತ್ರ ನೀರು ಒಯ್ಯುತ್ತೇವೆ ಎನ್ನುತ್ತಾರೆ. ಆದರೆ ಬೇಸಿಗೆಯಲ್ಲಿ ನದಿ ಸಂಪೂರ್ಣ ಬತ್ತುತ್ತದೆ. ಈ ಹಿಂದೆ ಯಲ್ಲಾಪುರಕ್ಕೆ ಬೇಡ್ತಿ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಕೋಟಿ ಕೋಟಿ ಸುರಿದರೂ ಪ್ರಯೋಜನವಾಗಿಲ್ಲ. ಹಲವು ವಿಫಲ ನಿದರ್ಶನಗಳು ಇರುವಾಗ, ಬೇಸಿಗೆಯಲ್ಲಿ ಒಣಗುವ ನದಿಯಲ್ಲಿ ಈ ಯೋಜನೆ ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಮೂಡಿದೆ.
ಹೊಸ ಯೋಜನೆಯಿಂದ ಮೂರು ಕಡೆ ಪಂಪಿಂಗ್ ಸ್ಥಾವರ ನಿರ್ಮಿಸಲಾಗುತ್ತದೆ. ವಿದ್ಯುತ್ ಲೈನ್ ಗಾಗಿ ಮರಗಳ ಮಾರಣಹೋಮ ಆಗಲಿದೆ. ಇದನ್ನೆಲ್ಲ ತಡೆಯಲು ಶ್ರೀಗಳ ನೇತೃತ್ವದಲ್ಲಿ ಹೋರಾಟ ಸಂಘಟಿತವಾಗಿದೆ.
ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ತಜ್ಞರಾದ ಡಾ.ಕೇಶವ ಕೊರ್ಸೆ, ಬಾಲಚಂದ್ರ ಸಾಯಿಮನೆ ಇತರರು ಯೋಜನೆಯ ಕುರಿತು ವಿವರಿಸಿ, ಜನಜಾಗೃತಿ ಮೂಡಿಸಲಿದ್ದಾರೆ.
ಆಂದೋಲನಕ್ಕೂ ಮುನ್ನ 9.30 ಕ್ಕೆ ಯಲ್ಲಾಪುರ, ನಂದೊಳ್ಳಿ, ಚಂದಗುಳಿ, ಮಾಗೋಡ, ಸೂರೆಮನೆ, ಮಳಲಗಾಂವ, ಕುಂದರಗಿ, ಹಿತ್ಲಳ್ಳಿ, ಉಮ್ಮಚಗಿ, ಮಂಚಿಕೇರಿ ಮುಂತಾದ ಭಾಗಗಳಿಂದ ಏಕಕಾಲದಲ್ಲಿ ಬೈಕ್ ರ಼್ಯಾಲಿ ಹೊರಡಲಿದ್ದು, 10.15 ಕ್ಕೆ ತುಂಬೇಬೀಡು ತಲುಪಲಿದೆ. ನಂತರ ಶ್ರೀಗಳ ಸಾನ್ನಿಧ್ಯದಲ್ಲಿ ಜನಾಂದೋಲನ ನಡೆಯಲಿದೆ. ಬೇಡ್ತಿ ಕಣಿವೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿ ಕೋರಿದೆ.







