ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ ಸಮೀಪ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಾರಿನ ಎರಡು ಟೈರ್ ಗಳು ಏಕಾಏಕಿ ಒಡೆದು, ಪಂಕ್ಚರ್ ಆಗಿ ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಹೊರಟ್ಟಿಯವರ ಕಾರು, ಕೋಳಿಕೇರಿ ಹಾಗೂ ಮಾವಳ್ಳಿ ಕ್ರಾಸ್ ನಡುವಿನ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ವಿಷಯ ತಿಳಿದ ತಕ್ಷಣ ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಸ್ಥಳಕ್ಕೆ ಬಂದು, ತಮ್ಮ ಕಾರಿನಲ್ಲಿ ಹೊರಟ್ಟಿಯವರನ್ನು ಹುಬ್ಬಳ್ಳಿಗೆ ಕಳುಹಿಸಿದರು. ಪೊಲೀಸರೂ ಸ್ಥಳಕ್ಕೆ ಬಂದು ಬೇರೆ ಟೈರ್ ಅಳವಡಿಸಲು ವ್ಯವಸ್ಥೆ ಕಲ್ಪಿಸಿದರು.
ಕಾರು ವೇಗವಾಗಿದ್ದರೂ ಚಾಲಕನ ಮುನ್ನೆಚ್ಚರಿಕೆಯಿಂದ ದೊಡ್ಡ ಅನಾಹುತ ತಪ್ಪಿದೆ. ಅದೃಷ್ಟವಶಾತ್ ಹೊರಟ್ಟಿಯವರು ಯಾವುದೇ ಅಪಾಯಕ್ಕೊಳಗಾಗದೇ ಪಾರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳೇ ತುಂಬಿದ್ದು, ಪ್ರತಿನಿತ್ಯ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹೊಂಡಗಳ ಕಾರಣದಿಂದಲೇ ಟೈರ್ ಬ್ಲಾಸ್ಟ್ ಆಗುವುದು, ಪಂಕ್ಚರ್ ಆಗುವುದು, ಅಪಘಾತವಾಗುವುದು ಸಾಮಾನ್ಯ ಸಂಗತಿಯಾಗಿದೆ. ಇದೀಗ ರಾಜಕಾರಣಿಗಳ ಕಾರಿಗೇ ಇಂತಹ ಸ್ಥಿತಿ ಬಂದಿದ್ದು, ಇನ್ನಾದರೂ ರಸ್ತೆ ದುರಸ್ತಿಗೆ ಕ್ರಮ ಆಗಲಿ ಎಂಬ ಆಶಯ ಜನಸಾಮಾನ್ಯರದಾಗಿದೆ







