ಯಲ್ಲಾಪುರದ ಟಿಎಂಎಸ್ (ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ) ಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಸಹಕಾರಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಕಳೆದ ಸೆಪ್ಟೆಂಬರ್ 28 ರಂದು ಟಿಎಂಎಸ್ ಆಡಳಿತ ಮಂಡಳಿಯ ಆಯ್ಕೆಗಾಗಿ ಚುನಾವಣೆ ನಡೆದಿದ್ದರೂ, ಚುನಾವಣೆಯ ವಿಚಾರವಾಗಿ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಾಕಿ ಇರುವುದರಿಂದ ಮತ ಎಣಿಕೆ ಪ್ರಕ್ರಿಯೆ ನಡೆದಿಲ್ಲ. ಹಾಗಾಗಿ ನೂತನ ಆಡಳಿತ ಮಂಡಳಿಯ ಆಯ್ಕೆಯಾಗಿಲ್ಲ.
ಪ್ರಸ್ತುತ ಅಧಿಕಾರದಲ್ಲಿದ್ದ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ನೇತೃತ್ವದ ಆಡಳಿತ ಮಂಡಳಿಯ ಅವಧಿ ಅಕ್ಟೋಬರ್ 13 ರಂದು ಮುಕ್ತಾಯಗೊಂಡಿದೆ ಎಂದು ಹೇಳಿ ಸಂಘದ ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಅಜ್ಮತ್ ಉಲ್ಲಾ ಖಾನ್ ಅವರು ಟಿಎಂಎಸ್ ಗೆ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು.
ಈ ಆದೇಶದ ವಿರುದ್ಧ ಎನ್.ಕೆ.ಭಟ್ಟರ ತಂಡ ಧಾರವಾಡ ಉಚ್ಛ ನ್ಯಾಯಾಲಯದ ಮೋರೆಹೋಗಿತ್ತು. ತಮ್ಮ ಅವಧಿ ಮುಗಿಯುವ ಮುಂಚಿತವಾಗಿ ಆಡಳಿತಾಧಿಕಾರಿಗಳ ನೇಮಕ ಮಾಡಿರುವುದು ಕಾನೂನಿಗೆ ವಿರುದ್ಧವಾದ ಪ್ರಕ್ರಿಯೆ ಎಂದು ವಿಚಾರಣೆಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಿದೆ.
ಮತದಾನದ ವಿಚಾರವಾಗಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಮುಗಿದು, ತೀರ್ಪು ಪ್ರಕಟವಾಗಿ, ಮತ ಎಣಿಕೆ ನಡೆಯುವವರೆಗೂ ಈಗಿರುವ ಆಡಳಿತ ಮಂಡಳಿಯೇ ಮುಂದುವರಿಯಬೇಕೆಂದು ನ್ಯಾಯಾಲಯ ಆದೇಶ ನೀಡಿದೆ.







