ಕೈಗಡಿ ಸಮೀದ ಹೊಳೆಯಲ್ಲಿ ಮುಳುಗಿ ಮೃತಪಟ್ಟ ಯಲ್ಲಾಪುರ ಪಟ್ಟಣದ ಸಬಗೇರಿಯ ಸಾಗರ ದೇವಾಡಿಗ ಸಹಜವಾಗಿ ಸತ್ತಿಲ್ಲ. ಬರ್ತಡೆ ಪಾರ್ಟಿ ನೆಪದಲ್ಲಿ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಮೃತ ಯುವಕನ ತಂದೆ ರಾಮಾ ನಾರಾಯಣ ದೇವಾಡಿಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಳೆದ ಅಕ್ಟೋಬರ್ 7 ರಂದು ನನ್ನ ಮಗ ಸಾಗರನಿಗೆ ಆತನ ಗೆಳೆಯನಾದ ಪುನಿತ್ ಅಶೋಕ ಗೊಂದಳೆ ಕರೆ ಮಾಡಿ, ‘ನನ್ನ ಹುಟ್ಟುಹಬ್ಬ ಇದೆ, ಕವಡಿಕೆರೆ ಬಳಿ ಪಾರ್ಟಿ ಮಾಡೋಣ ಬಾ’ ಎಂದು ಕರೆದಿದ್ದ. ಪಾರ್ಟಿಗೆಂದು ಕವಡಿಕೆರೆಗೆ ಹೋದ ಮಗ ಕೈಗಡಿ ಸಮೀಪದ ಹೊಳೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ ಎಂದು ಅವನೊಂದಿಗೆ ಹೋದ ಗೆಳೆಯರಾದ ಪುನೀತ ಗೊಂದಳೆ, ದಿನೇಶ ಪ್ರಭಾಕರ ನಾಯ್ಕ, ವಿನೋದ ಗೊಂದಳೆ, ನಾಗರಾಜ ಭಟ್ಟ, ರಾಹುಲ್ ಬಂದು ಪೊಲೀಸ್ ಠಾಣೆಯಲ್ಲಿ ದೂರಿದ್ದಾರೆ. ಅವರು ಕವಡಿಕೆರೆ ಬದಲಿಗೆ ಕೈಗಡಿ ಹೊಳೆಗೆ ಹೋಗಿರುವುದು ನಮಗೆ ತಿಳಿದದ್ದು ಆಗಲೇ.
ಪಾರ್ಟಿಗೆಂದು ಹೋಗಿ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ ಎನ್ನುವ ಸುದ್ದಿ ನನಗೆ ಆಘಾತ ಉಂಟು ಮಾಡಿದೆ. ನಾಪತ್ತೆಯಾಗಿದ್ದ ಮಗ ಅಕ್ಟೋಬರ್ 9 ರಂದು ಮುಳುಗಿದ ಸ್ಥಳದಿಂದ 500 ಮೀ ದೂರದಲ್ಲಿ ಶವವಾಗಿ ದೊರಕಿದ್ದಾನೆ.
ಪುನಿತ್ ಅಶೋಕ ಗೊಂದಳೆ ತನ್ನ ಹುಟ್ಟುಹಬ್ಬದ ನಿಮಿತ್ತ ತನ್ನ ಸ್ನೇಹಿತರ ಜೊತೆಗೆ ನನ್ನ ಮಗನನ್ನು ಕರೆದುಕೊಂಡು ಹೋಗಿ, ಯಾವುದೋ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ, ತಮ್ಮೊಳಗೆ ಸಂಚು ರೂಪಿಸಿ ಕೊಲೆ ಮಾಡಿದ್ದಾರೆಂದು ರಾಮಾ ದೇವಡಿಗ ದೂರಿದ್ದಾರೆ.
ಮಗನ ಸಾವಿನ ಹಿಂದೆ ಕೊಲೆಯ ಶಂಕೆ ಇದ್ದು, ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.







