ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಬೇಡ್ತಿ-ವರದಾ ನದಿ ಜೋಡಣೆ ವಿರುದ್ಧ ಬ್ರಹತ್ ಪ್ರತಿಭಟನಾ ಬೈಕ್ ರ಼್ಯಾಲಿ ಹಾಗೂ ಸಮಾವೇಶ ಯಲ್ಲಾಪುರ ತಾಲೂಕಿನ ತುಂಬೆಬೀಡಿನಲ್ಲಿ ನಡೆಯಿತು.
ವೃಕ್ಷಾರೋಪಣ ನೆರವೇರಿಸಿ ಸಮಾವೇಶ ಉದ್ಘಾಟಿಸಿದ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ಜನಪ್ರತಿನಿಧಿಗಳನ್ನು ಭೇಟಿಯಾಗಿ ಒತ್ತಡ ಹೇರುವುದು, ಯೋಜನೆಯಿಂದಾಗುವ ಹಾನಿಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವುದು, ಜನಾಂದೋಲನ, ಕಾನೂನು ಹೋರಾಟದ ಮೂಲಕ ಈ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಯೋಜನೆಯ ವಿರುದ್ಧದ ಹೋರಾಟವನ್ನು ವಿರೋಧಿಸುವವರ ಸಂಖ್ಯೆಯೂ ಸಾಕಷ್ಟಿದೆ. ಇದಕ್ಕೆ ಕೆಲವು ಜನಪ್ರತಿನಿಧಿಗಳ ಬೆಂಬಲವೂ ಇದೆ. ಹಾಗಾಗಿ ಜನರು ಇನ್ನಷ್ಟು ಸಂಘಟಿತರಾದರೆ ಮಾತ್ರ ಹೋರಾಟದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಯೋಜನೆಯ ಡಿಪಿಆರ್ ಆಗಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ತಲೆಗೆ ಎಣ್ಣೆ ಸವರಿ, ಹೋರಾಟ ಹತ್ತಿಕ್ಕುವ ಪ್ರಯತ್ನ ಇದು. ಆದರೆ ಇನ್ನೂ ಡಿಪಿಆರ್ ಆಗಿಲ್ಲ. ಎತ್ತಿನಹೊಳೆ ಯೋಜನೆಯ ವೈಫಲ್ಯದ ನಿದರ್ಶನ ಕಣ್ಣೆದುರೇ ಇದೆ. ಈ ಯೋಜನೆ ಜಾರಿಗೆ ಬಂದರೂ ಅದೇ ಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಈ ಹಂತದಲ್ಲೇ ಗಟ್ಟಿ ಧ್ವನಿಯ ಮೂಲಕ ಯೋಜನೆಯನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ನಡೆಯುವ ಹೋರಾಟದಲ್ಲಿ ಜನಪ್ರತಿನಿಧಿಗಳು ಪಕ್ಷಾತೀತವಾಗಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಜನರ ಧ್ವನಿಗೆ ಇನ್ನಷ್ಟು ಶಕ್ತಿ ಬರುತ್ತದೆ ಎಂದರು.
ಬೇಡ್ತಿ ವರದಾ ನದಿ ಜೋಡಣೆಯ ಡಿಪಿಆರ್ ಗೆ ತಡೆ ಹಿಡಿಯಬೇಕು. ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಂತ್ರಿಗಳನ್ನು ಭೇಟಿಯಾಗಿ ಯೋಜನೆಯ ಜಾರಿಯಿಂದಾಗುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ, ಯೋಜನೆ ತಡೆಯುವ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಜ್ಯ ಹಾಗೂ ದೇಶಕ್ಕಾಗಿ ಜಿಲ್ಲೆಯ ತ್ಯಾಗ ದೊಡ್ಡದು. ಈ ತ್ಯಾಗಕ್ಕೆ ಯಾವುದೇ ಸರ್ಕಾರದಿಂದ ನ್ಯಾಯ ದೊರಕಿಲ್ಲ. ಇಂತಹ ಪರಿಸರಕ್ಕೆ ಮಾರಕವಾದ ಯೋಜನೆಗಳನ್ನು ಪ್ರಬಲವಾಗಿ ವಿರೋಧಿಸಲು ಎಲ್ಲರೂ ಒಟ್ಟಾಗಬೇಕು. ಇಂತಹ ಯೋಜನೆಗಳಿಂದ ನಲುಗಿ ಹೋಗಿರುವ ಜಿಲ್ಲೆಯ ಧಾರಣ ಸಾಮರ್ಥ್ಯದ ಬಗ್ಗೆ ಅಧ್ಯಯನ ಆಗಬೇಕು. ಪರಿಸರಕ್ಕೆ ಪೂರಕವಾದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಯೋಜನೆಯ ಬಗ್ಗೆ ಜನಾಭಿಪ್ರಾಯವನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.
ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್.ಹೆಗಡೆ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪರಿಸರ ತಜ್ಞ ಬಾಲಚಂದ್ರ ಸಾಯೀಮನೆ, ರಂಗಕರ್ಮಿ ರಾಮಕೃಷ್ಣ ಭಟ್ಟ ದುಂಡಿ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿದರು.
ಸೀಮಾ ಪರಿಷತ್ ಅಧ್ಯಕ್ಷ ಶ್ರೀಪಾದ ಹೆಗಡೆ ಶಿರನಾಲಾ ಶ್ರೀಗಳಿಗೆ ಫಲ ಸಮರ್ಪಿಸಿ, ಸ್ವಾಗತಿಸಿದರು. ನರಸಿಂಹ ಸಾತೊಡ್ಡಿ ಮನವಿ ವಾಚಿಸಿದರು. ಎಂ.ಕೆ.ಭಟ್ಟ ಯಡಳ್ಳಿ, ಪ್ರಕಾಶ ಭಟ್ಟ ತುಂಬೆಬೀಡು ನಿರ್ವಹಿಸಿದರು. ವಿಶ್ವನಾಥ ಹೆಗಡೆ ಬಾಮನಕೊಪ್ಪ ವಂದಿಸಿದರು.
ಸಮಾವೇಶಕ್ಕೂ ಮುನ್ನ ಯಲ್ಲಾಪುರ, ನಂದೊಳ್ಳಿ, ಚಂದಗುಳಿ, ಮಾಗೋಡ, ಸೂರೆಮನೆ, ಮಳಲಗಾಂವ, ಕುಂದರಗಿ, ಹಿತ್ಲಳ್ಳಿ, ಉಮ್ಮಚಗಿ, ಮಂಚಿಕೇರಿ ಭಾಗದಿಂದ ಸಾವಿರಾರು ಬೈಕ್ ಗಳಲ್ಲಿ ಸವಾರರು ರ಼್ಯಾಲಿ ಮೂಲಕ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಿದರು.







