ಯಲ್ಲಾಪುರ ತಾಲೂಕಿನ ವಿವಿಧೆಡೆ ಬಂಗಾರ, ಹಣ ದೋಚುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸಣಗಿ ಗ್ರಾ.ಪಂ.ನ ಮಡಿವಾಳ ಕೇರಿಯ ಈಶ್ವರ ಮಂಜುನಾಥ ಸಿದ್ದಿ ಬಂಧಿತ ಯುವಕ. ಕೂಲಿ ಕೆಲಸ ಮಾಡುತ್ತಿದ್ದ ಈತ, ಕೆಲಸದ ನೆಪದಲ್ಲಿ ಮನೆಗಳಿಗೆ ಹೋಗುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದೇ, ಬೀಗ ಹಾಕಿರುವ ಸಮಯ ಸಾಧಿಸಿ ಬಾಗಿಲು ಮುರಿದು ಹಣ, ಬಂಗಾರ ದೋಚುತ್ತಿದ್ದ. ಹಗಲಿನಲ್ಲೇ ಕಳ್ಳತನ ಮಾಡುವುದು ಇವನ ವಿಶೇಷವಾಗಿತ್ತು.
ಯಲ್ಲಾಪುರ ಪಟ್ಟಣ, ಮಂಚಿಕೇರಿ, ಕುಂದರಗಿ ಭಾಗದಲ್ಲಿ ಕಳ್ಳತನ ಮಾಡಿ ಕೆಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು, ಅಂಕೋಲಾದ ಬಾಳೆಗುಳಿ ಕ್ರಾಸ್ ಬಳಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನಿಂದ 18.08 ಲಕ್ಷ ರೂ ಮೌಲ್ಯದ ಆಭರಣ ಹಾಗೂ ಒಂದು ಸ್ಕೂಟಿ ವಶಕ್ಕೆ ಪಡೆಯಲಾಗಿದೆ.
ಈತನ ಪತ್ತೆಗಾಗಿ ಯಲ್ಲಾಪುರ ಪಿ.ಐ ರಮೇಶ ಹಾನಾಪುರ ನೇತೃತ್ವದಲ್ಲಿ, ಪಿ.ಎಸ್.ಐ.ಗಳಾದ ರಾಜಶೇಖರ ವಂದಲಿ, ಮಹಾವೀರ ಕಾಂಬ್ಳೆ, ಸಿದ್ದಪ್ಪ ಗುಡಿ, ಎಸ್.ವಿ.ಚವ್ಹಾಣ, ಅಲ್ಲದೇ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹಮ್ಮದ್ ಶೇಖ್, ಶೋಭಾ ನಾಯ್ಕ, ಗಿರೀಶ ಲಮಾಣಿ, ಪರಮೆಶ್ವರ ಮಫಿಸಿ, ರೇಖಾ ಎಂ.ಎಸ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೆಲವು ದಿನಗಳ ಹಿಂದಷ್ಟೇ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಚಿಕೇರಿ ಭಾಗದ ಮುಖಂಡರು ಯಲ್ಲಾಪುರ ಪೊಲೀಸರ ನಿಷ್ಕ್ರಿಯತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅದಕ್ಕೆ ಕಳ್ಳನ ಬಂಧನದ ಮೂಲಕ ಪೊಲೀಸರು ಉತ್ತರ ನೀಡಿದ್ದಾರೆ.







