ಯಲ್ಲಾಪುರ ತಾಲೂಕಿನಲ್ಲಿ ಸೋಮವಾರ ನರಕ ಚತುದರ್ಶಿಯನ್ನು ಸಾಂಪ್ರದಾಯಿಕ ಶೃದ್ಧಾಭಕ್ತಿಯಿಂದ ಆಚರಿಸಲಾಯಿತು.
ಬೇಡ್ತಿ ಸೇತುವೆಯ ಬಳಿ ಇರುವ ಹೊಳೆಹುಲಿಯಪ್ಪನಿಗೆ ಸುತ್ತಮುತ್ತಲಿನ ಸಾವಿರಾರು ಜನರು ಭಕ್ತರು ಆಗಮಿಸಿ ಹಣ್ಣುಕಾಯಿ ಸೇವೆ ಸಲ್ಲಿಸಿದರು. ಹುಲಿಯಪ್ಪ ದೇವರಿಗೆ ನೈವೇದ್ಯಕ್ಕೆಂದು ಒಡೆದು ಇಡಲಾದ ತೆಂಗಿನಕಾಯಿಗಳ ಸಾಲು ಗಮನ ಸೆಳೆಯಿತು. ರೈತರು ತಾವು ಸಾಕಿದ ದನ-ಕರುಗಳ ರಕ್ಷಣೆಗಾಗಿ ದೀಪಾವಳಿಯ ಸಂದರ್ಭದಲ್ಲಿ ಹುಲಿಯಪ್ಪನಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಈ ಭಾಗದ ವಿಶೇಷತೆ.
ಪೂಜೆ ಮುಗಿದ ನಂತರ ಹುಲಿಯಪ್ಪ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಶಿವರಾಮ ಭಾಗ್ವತ ಮಣ್ಕುಳಿ ಅವರು ಎಲ್ಲ ಭಕ್ತರ ಪರವಾಗಿ ಪ್ರಾರ್ಥನೆ ಸಲ್ಲಿಸಿ, ಪ್ರಸ್ತಾಪಿತ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ ಆಗದ ರೀತಿಯಲ್ಲಿ ಅನುಗ್ರಹ ಮಾಡುವಂತೆ ಪ್ರಾರ್ಥಿಸಿದರು.
ಯೋಜನೆ ಅನುಷ್ಠಾನಗೊಂಡರೆ ಆಗುವ ದುಷ್ಪರಿಣಾಮಗಳು, ಜನರಿಗೆ, ಪ್ರಕೃತಿಗೆ ಆಗುವ ತೊಂದರೆಗಳನ್ನು ವಿವರಿಸಿ, ಇಂತಹ ಯೋಜನೆಯ ಅನುಷ್ಠಾನ ಬೇಡ. ಅಧಿಕಾರದಲ್ಲಿರುವವರಿಗೆ ಇಂತಹ ಯೋಜನೆಯ ಅನುಷ್ಠಾನಗೊಳಿಸದಂತೆ ಬುದ್ಧಿ ಬರಲಿ, ಇನ್ನು ಮುಂದೆ ಜಿಲ್ಲೆಗೆ ಇಂತಹ ಯಾವುದೇ ಯೋಜನೆಗಳು ಬಾರದಂತೆ ಅನುಗ್ರಹಿಸುವಂತೆ ಕೇಳಿಕೊಂಡರು. ಅದೇ ವೇಳೆ ಹುಲಿಯಪ್ಪ ದೇವರಿಂದ ಪ್ರಸಾದ ಅನುಗ್ರಹವಾಗಿದ್ದು, ಭಕ್ತರಿಂದ ಹರ್ಷೋದ್ಘಾರ ಮೊಳಗಿತು.
ಸೇರಿದ 500 ಕ್ಕೂ ಹೆಚ್ಚು ಭಕ್ತರು ಭಾರತ ಮಾತೆಗೆ ಜೈಕಾರ ಹಾಕಿ, ವಂದೇ ಮಾತರಂ ಘೋಷಣೆಯೊಂದಿಗೆ ಯೋಜನೆಯ ವಿರುದ್ಧ ಒಕ್ಕೊರಲ ಪ್ರಾರ್ಥನೆ ಸಲ್ಲಿಸಿದರು.







