ದೀಪಾವಳಿ ಪ್ರಯುಕ್ತ ಹುಲಿಯಪ್ಪನಿಗೆ ಪೂಜೆ ಸಲ್ಲಿಸಿದ ಮಾರನೇ ದಿನವೇ ಹುಲಿಯಪ್ಪನ ದಾಳಿಯಿಂದ ಇಬ್ಬರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಮಾಗೋಡ ಸಮೀಪದ ಚಂದಗುಳಿ ಬಳಿ ನಡೆದಿದೆ.
ಮಾಗೋಡಿನ ಬಕ್ಕಳತಗ್ಗಿನ ಗಣೇಶ ಸಿದ್ದಿ ಹಾಗೂ ದೇಸಾಯಿಮನೆಯ ಧನಂಜಯ ಸಿದ್ದಿ ಎಂಬವರು ಬೈಕ್ ಮೇಲೆ ಮಂಗಳವಾರ ರಾತ್ರಿ ಚಂದಗುಳಿ ಹತ್ತಿರ ಬರುತ್ತಿರುವಾಗ, ಮರಿಗಳೊಂದಿಗೆ ಬರುತ್ತಿದ್ದ ಹುಲಿಯೊಂದು ಏಕಾಏಕಿ ಇವರ ಮೇಲೆ ಎರಗಿದೆ. ಇದರಿಂದ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಧನಂಜಯ ಅವರ ಕಾಲಿಗೆ ಹುಲಿಯ ಉಗುರು ತಾಗಿ ಗಾಯವಾಗಿದೆ.
ಹುಲಿ ಎರಗಿದದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್ ಬೀಳುತ್ತಿದ್ದಂತೆ ಹುಲಿ ಮರಿಗಳೊಂದಿಗೆ ಅಲ್ಲಿಂದ ಹೋಗಿದೆ.
ಕಳೆದ ಎರಡು ವರ್ಷಗಳಿಂದ ಹುಲಿ ದಾಳಿಯಿಂದ ಭಯದಲ್ಲೇ ಬದುಕುತ್ತಿದ್ದ ಮಾಗೋಡ ಭಾಗದ ಜನತೆ, ಇತ್ತೀಚೆಗೆ ಹುಲಿಗಳ ಓಡಾಟ ಕಡಿಮೆಯಾದ ಕಾರಣ ಸ್ವಲ್ಪ ನಿರಾಳರಾಗಿದ್ದರು. ಈಗ ಹುಲಿ ದಾಳಿಯಿಂದ ಮತ್ತೆ ಕಂಗಾಲಾಗುವಂತಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಹುಲಿ ದಾಳಿಯಿಂದ ಜನ, ಜಾನುವಾರುಗಳನ್ನು ರಕ್ಷಿಸಲು ಕ್ರಮಕ್ಕೆ ಮುಂದಾಗಬೇಕಿದೆ.







