ಆರೋಪಿಯನ್ನು ಬಂಧಿಸಲು ಬಂದ ಬೆಳಗಾವಿಗೆ ಬಂದ ಯಲ್ಲಾಪುರ ಪೊಲೀಸರ ಮೇಲೆ ಆರೋಪಿ ಹಲ್ಲೆ ನಡೆಸಿ, ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮಂಗಳೂರಿನ ಮಹಮ್ಮದ್ ರಫೀಕ್ ಇಸ್ಮಾಯಿಲ್ ಎಂಬಾತನನ್ನು ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲು ಯಲ್ಲಾಪುರ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಬೆಳಗಾವಿಗೆ ತೆರಳಿದ್ದರು.
ಬೆಳಗಾವಿಯ ಖಾಸಭಾಗ ವಾಲಿ ಚೌಕದ ಬಳಿ ಇರುವ ವೊಡ್ಕಾ ಬಾರ್ ಬಳಿ ಈತನನ್ನು ಬಂಧಿಸಲು ಯತ್ನಿಸಿದಾಗ ಪಿಎಸ್ಐಗಳಾದ ರಾಜಶೇಖರ ಚೆನ್ನಪ್ಪ ವಂದಲಿ ಹಾಗೂ ಸಿದ್ದಪ್ಪ ಗುಡಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅವರನ್ನು ತಪ್ಪಿಸಿ ಆರೋಪಿಯನ್ನು ಹಿಡಿಯಲು ಹೋದ ಸಿಬ್ಬಂದಿ ಮಹಮ್ಮದ್ ಶಫಿ ಅವರ ಮೇಲೂ ಹಲ್ಲೆ ಮಾಡಿದ್ದಾನೆ.
ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ಚಾಕುವಿನಿಂದ ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಾಗೂ ಆತ್ಮಹತ್ಯೆಗೆ ಯತ್ನಿಸಿದ ಮಹಮ್ಮದ್ ರಫೀಕ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







