ತಮಗೆ ಸೇರಿದ ತೋಟದ ಅಡಕೆ ಕೊಯ್ದುಕೊಂಡು ಹೋಗುತ್ತಿರುವವರನ್ನು ತಡೆದು ಪ್ರಶ್ನಿಸಿದ ರೈತರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಳೆಹದ್ದದ ಕಾನಗೋಡಿನ ನಾರಾಯಣ ಹೆಗಡೆ ಅವರ ಹಾಗೂ ಅವರಿಗೆ ಸಂಬಂಧಿಸಿದವರ ತೋಟದಿಂದ ನಾಗಭೂಷಣ ಗಣಪತಿ ಹೆಗಡೆ ಹಾಗೂ ಮಂಜುನಾಥ ಗಣಪತಿ ಹೆಗಡೆ ಎಂಬವರು ಅಡಕೆ ಕೊಯ್ಲು ಮಾಡಿಕೊಂಡು ಟಾಟಾಏಸ್ ವಾಹನದ ಮೇಲೆ ಸಾಗಿಸುತ್ತಿದ್ದರು.
ಇದನ್ನು ಕಂಡು ನಾರಾಯಣ ಹೆಗಡೆ ಹಾಗೂ ಅವರ ತಮ್ಮ ಪ್ರಕಾಶ ಹೋಗಿ ತಡೆದು, ‘ನಮ್ಮ ತೋಟದ ಅಡಕೆ ಏಕೆ ತೆಗೆದುಕೊಂಡು ಹೋಗುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟುಗೊಂಡು ಇಬ್ಬರನ್ನೂ ಥಳಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನಾರಾಯಣ ಹೆಗಡೆ ದೂರಿದ್ದಾರೆ.
ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







