ಯಲ್ಲಾಪುರ ತಾಲೂಕಿನಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಕಳ್ಳರ ಕೈಚಳಕಕ್ಕೆ ಕಡಿವಾಣ ಹಾಕುವ ಪ್ರಯತ್ನಗಳು ಸಾಲುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಪಟ್ಟಣ ಭಾಗದಲ್ಲಿ ಕಳ್ಳರ ಕೈಚಳಕ ಮುಂದುವರಿದಿದ್ದು, ತಾಲೂಕಾ ಪಂಚಾಯತ ಸಮೀಪದ ಮತ್ತೆರಡು ಅಂಗಡಿಗಳಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದೆ.
ತಾಲೂಕಾ ಪಂಚಾಯತ ಸಮೀಪ ಇರುವ ಸೀತಾಲಕ್ಷ್ಮೀ ಮೆಡಿಕಲ್ಸ್, ಅದರ ಎದುರಿಗಿರುವ ಶಂಕರ್ ಸ್ವೀಟ್ಸ್ ಎಂಬ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ.
ರಾತ್ರಿ ವೇಳೆ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಮೆಡಿಕಲ್ಸ್ ನಲ್ಲಿ ಇದ್ದ 40 ಸಾವಿರ ರೂಗಿಂತ ಹೆಚ್ಚಿನ ಹಣ ಕದ್ದೊಯ್ದಿದ್ದಾರೆ. ಬೇಕರಿಯಿಂದಲೂ ಕೆಲ ಸಾಮಗ್ರಿಗಳನ್ನು ಹಾಗೂ ಹಣವನ್ನು ಕದ್ದಿದ್ದಾರೆ.
ಬೆಳಗಿನ ಜಾವ ಅಂಗಡಿಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಸ್ಥಳೀಯರು, ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕರು ಸ್ಥಳಕ್ಕೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪಟ್ಟಣದಲ್ಲಿ ಅಂಗಡಿ, ಮನೆಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುವುದು, ತೋಟಗಳಿಂದ ಬೆಳೆ ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಕಳ್ಳರ ಕೃತ್ಯಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಆಗಬೇಕೆಂಬುದು ತಾಲೂಕಿನ ಜನರ ಆಗ್ರಹವಾಗಿದೆ.







