ಯಲ್ಲಾಪುರ ತಾಲೂಕಿನ ಹಿತ್ಲಕಾರಗದ್ದೆ–ಮಾಗೋಡ ಜಿಲ್ಲಾ ಮುಖ್ಯ ರಸ್ತೆ ಹಾಗೂ ನಂದೊಳ್ಳಿ–ಅಣಲಗಾರ ಗೋಪಾಲಕೃಷ್ಣ ದೇವಸ್ಥಾನ (ಗ್ರಾಮೀಣ ರಸ್ತೆ) ನಿರ್ಮಾಣಕ್ಕಾಗಿ ಒಟ್ಟು 9.90 ಕೋಟಿ ರೂ. ಅನುದಾನ ಮಂಜೂರಾಗಿದೆ.
ಈ ಕುರಿತು ಶಾಸಕ ಶಿವರಾಮ ಹೆಬ್ಬಾರ ಮಾಹಿತಿ ನೀಡಿದ್ದು, ತಾಲೂಕಿನ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ ಇದೆಂದು ತಿಳಿಸಿದ್ದಾರೆ.
ಈ ಎರಡು ಪ್ರಮುಖ ರಸ್ತೆ ದುರಸ್ತಿಯಿಂದ ಗ್ರಾಮೀಣ ಭಾಗದ ಸಂಚಾರಕ್ಕೆ ಅನೂಕುಲವಾಗಲಿದೆ. ಜನಜೀವನ ಸುಗಮಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. ವಿಶೇಷವಾಗಿ ಗೋಪಾಲಕೃಷ್ಣ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯ ನವೀಕರಣವು ಭಕ್ತರ ಸಂಚಾರ, ಸ್ಥಳೀಯ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲಿದೆ. ಹಿತ್ಲಕಾರಗದ್ದೆ–ಮಾಗೋಡ ಪ್ರಮುಖ ಮಾರ್ಗದ ಸುಧಾರಣೆ ಮೂಲಕ ತಾಲೂಕಿನ ಒಳನಾಡು ಸಂಪರ್ಕ ಮತ್ತಷ್ಟು ಬಲಪಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅನುದಾನ ಮಂಜೂರು ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಶಾಸಕ ಹೆಬ್ಬಾರ ಕೃತಜ್ಞತೆ ಸಲ್ಲಿಸಿದ್ದಾರೆ.







