ಹಾವೇರಿ: ಧಾರಾಕಾರವಾಗಿ ಸುರಿಯಬೇಕಿದ್ದ ಮಳೆ ಕೈಕೊಟ್ಟ ಪರಿಣಾಮ ಹಾವೇರಿ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಬಿ.ಸಿ. ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ. ಹೊಲಗಳಲ್ಲಿ ಬಿತ್ತಿದ ಬೆಳೆಗಳು ಕಣ್ಣೆದುರೇ ಒಣಗಿ ಹೋಗುತ್ತಿದ್ದು, ಸಾಲ ಮಾಡಿ ಮರುಬಿತ್ತನೆ ಮಾಡಿದ ರೈತರಿಗೆ ಮಳೆಯಿಲ್ಲದೆ ಬೀಜವೂ ಮಣ್ಣು ಪಾಲಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹೊಲದಲ್ಲಿ ಮೇಲ್ನೋಟಕ್ಕೆ ಹಸಿರು ಕಾಣಿಸಿಕೊಂಡರೂ ಸರಿಯಾದ ಇಳುವರಿ ಸಿಗುವ ಪರಿಸ್ಥಿತಿ ಇಲ್ಲ. ಆದರೆ, ಜಿಲ್ಲೆಯ ನೈಜ ಸ್ಥಿತಿಗತಿ ಹಾಗೂ ರೈತರ ಸಂಕಷ್ಟವನ್ನು ಅರಿಯಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು, “ಹೊಲದಲ್ಲಿ ಹಸಿರು ಕಂಡ ತಕ್ಷಣ ಬರಗಾಲವೇ ಇಲ್ಲ” ಎಂಬ ರೀತಿಯ ಹಗುರವಾದ ಹೇಳಿಕೆ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದು ಬಿ.ಸಿ. ಪಾಟೀಲ್ ಕಿಡಿಕಾರಿದ್ದಾರೆ.
ಹಾವೇರಿ ಜಿಲ್ಲೆಯ ರೈತರು ಇಷ್ಟೊಂದು ಸಂಕಷ್ಟದಲ್ಲಿದ್ದರೂ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸದಿರುವುದು ತೀವ್ರ ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ.
ಆರು ಶಾಸಕರು, ಸಚಿವರಿದ್ದರೂ ರೈತರ ಕಣ್ಣೀರು ಕಾಣುತ್ತಿಲ್ಲವೇ?
ಹಾವೇರಿ ಜಿಲ್ಲೆಯಲ್ಲಿ ಆರು ಜನ ಶಾಸಕರಿದ್ದಾರೆ, ಸಚಿವರೂ ಇದ್ದಾರೆ. ಆದರೂ ಜಿಲ್ಲೆಯ ರೈತರ ಕಣ್ಣೀರು ಮತ್ತು ಬೆಳೆ ಹಾನಿ ಜನಪ್ರತಿನಿಧಿಗಳ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಬಿ.ಸಿ. ಪಾಟೀಲ್ ಪ್ರಶ್ನಿಸಿದ್ದಾರೆ.
ರೈತರ ಹಿತ ಕಾಯಲು ಅಧಿಕಾರ ನೀಡಲಾಗಿದೆ. ಆದರೆ ರೈತರು ಸಂಕಷ್ಟದಲ್ಲಿರುವಾಗ ಅವರ ನೋವಿಗೆ ಸ್ಪಂದಿಸದಿದ್ದರೆ ಅಂತಹ ಅಧಿಕಾರಕ್ಕೆ ಏನು ಅರ್ಥ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ಜಂಟಿ ಸಮೀಕ್ಷೆಗೆ ಆಗ್ರಹ
ಹಾವೇರಿ ಜಿಲ್ಲೆಯ ನೈಜ ಬೆಳೆ ಹಾನಿಯ ಕುರಿತು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಬಿ.ಸಿ. ಪಾಟೀಲ್ ಆಗ್ರಹಿಸಿದ್ದಾರೆ.
ಅಲ್ಲದೆ,
– ಹಾವೇರಿ ಜಿಲ್ಲೆಯ ಸಂಕಷ್ಟಕ್ಕೊಳಗಾದ ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು.
– ನಷ್ಟ ಅನುಭವಿಸಿದ ಪ್ರತಿಯೊಬ್ಬ ರೈತನಿಗೂ ಸೂಕ್ತ ಪರಿಹಾರ ನೀಡಬೇಕು.
– ಬೆಳೆ ವಿಮೆ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು.
– ಬರ ಪರಿಹಾರ ಕಾರ್ಯಗಳನ್ನು ತಕ್ಷಣ ಆರಂಭಿಸಬೇಕು.
ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ರೈತ ಬೆಳೆದರೆ ಮಾತ್ರ ದೇಶ ಉಳಿಯುತ್ತದೆ. ರೈತನ ಹೊಟ್ಟೆಗೆ ಹೊಡೆಯುವ ಕೆಲಸ ನಿಲ್ಲಬೇಕು. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಹಾವೇರಿ ಜಿಲ್ಲೆಯ ರೈತರ ನೆರವಿಗೆ ಧಾವಿಸಬೇಕು,” – ಬಿ.ಸಿ. ಪಾಟೀಲ್



