ಯಲ್ಲಾಪುರ: ಕಾಳಮ್ಮನಗರದ ವಸತಿ ನಿಲಯ, ಪ್ರೌಢಶಾಲೆ, ಐಟಿಐ ಹಾಗೂ ಪದವಿ ಕಾಲೇಜು ನಡುವೆ ಕಿಡಿಗೇಡಿಗಳು ಗುರುವಾರ ಭಾರೀ ಪ್ರಮಾಣದ ಕಸ ಎಸೆದಿದ್ದು, ಪದವಿ ಕಾಲೇಜು ಪ್ರಾಚಾರ್ಯ ಡಾ ಆರ್ ಡಿ ಜನಾರ್ಧನ್ ವಿಶೇಷ ಮುತುವರ್ಜಿವಹಿಸಿ ಆ ತ್ಯಾಜ್ಯವನ್ನು ತೆಗಿಸಿದ್ದಾರೆ.
ಈ ಭಾಗದಲ್ಲಿ ತ್ಯಾಜ್ಯ ಎಸೆಯುವವರಿಗೆ ಅವರು ನಿರಂತರವಾಗಿ ಸ್ವಚ್ಛತೆಯ ಪಾಠ ಮಾಡುತ್ತಿದ್ದಾರೆ. ಕಾಳಮ್ಮನಗರ ದೇವಾಲಯದ ಹಿಂಬಾಗ ವಿದ್ಯಾಕಾಶಿಯಾಗಿ ಬದಲಾಗುತ್ತಿದ್ದು, ಅಲ್ಲಿನ ಪರಿಸರ ಸ್ವಚ್ಛವಾಗಿರಿಸುವ ಬಗ್ಗೆ ಅವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಇಲ್ಲಿನ ಪದವಿ ಕಾಲೇಜಿನಲ್ಲಿ 580 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರಸ್ತುತ ಪದವಿ ಕಾಲೇಜಿಗೆ ರಜೆಯಿದ್ದರೂ ಪಕ್ಕದ ಐಟಿಐ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ 230ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಪ್ರೌಢಶಾಲೆಗೆ `ಮಳೆ ರಜೆ’ ಜಾರಿಯಲ್ಲಿದ್ದು, ಅಲ್ಲಿ ಸಹ 600 ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರ ಹಿತದೃಷ್ಟಿಯಿಂದ ಪದವಿ ಕಾಲೇಜು ಪ್ರಾಚಾರ್ಯರು ಸುರಕ್ಷತೆಗೆ ಒತ್ತು ನೀಡಿ ತ್ಯಾಜ್ಯ ಆರಿಸಿದ್ದಾರೆ. ಈ ಭಾಗದಲ್ಲಿ ಯಾರೇ ತ್ಯಾಜ್ಯ ಎಸೆಯುವವರು ಕಂಡರೂ ಅವರನ್ನು ನಿಲ್ಲಿಸಿ ಸ್ವಚ್ಛತೆಯ ಪಾಠ ಮಾಡುವುದು ಅವರ ರೂಢಿ.
ಈ ಹಿಂದೆ ಸಹ ಡೆಂಗ್ಯು ಕುರಿತು ಅವರು ವಿಶೇಷ ಸಭೆ ನಡೆಸಿ ಮಕ್ಕಳಿಗೆ ಅರಿವು ಮೂಡಿಸಿದ್ದರು. `ಪಟ್ಟಣ ಪಂಚಾಯತ ಅಧಿಕಾರಿ ಹಾಗೂ ಸಿಬ್ಬಂದಿ ಸಹ ಮಕ್ಕಳ ಬಗ್ಗೆ ಕಾಳಜಿ ಹೊಂದಿದ್ದು, ತ್ವರಿತವಾಗಿ ಸ್ಪಂದಿಸಿದ್ದಾರೆ’ ಎಂದು ಪದವಿ ಕಾಲೇಜು ಪ್ರಾಚಾರ್ಯ ಡಾ ಆರ್ ಡಿ ಜನಾರ್ಧನ್ ಅಭಿಪ್ರಾಯ ವ್ಯಕ್ತಪಡಿಸಿದರು.





Discussion about this post